ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಂಡತಿಯನೊಲಿಸಿಕೊಳ್ಳುವುದು...

Last Updated 31 ಮಾರ್ಚ್ 2018, 19:30 IST
ಅಕ್ಷರ ಗಾತ್ರ

ಹೆಂಡತಿಯನ್ನು ಒಲಿಸಿಕೊಳ್ಳುವುದು ಹೇಗೆ? ಎಂದು ಸೈಕಾಲಜಿ ಓದಿರುವ ಸ್ನೇಹಿತನಿಗೆ ಲೋಕಾಭಿರಾಮವಾಗಿ ಕೇಳಿದೆ. ಜಸ್ಟ್ ಕೇಳಿದೆ ಅಷ್ಟೇ ನೆನಪಿನಲ್ಲಿಡಿ. ಈ ಪ್ರಶ್ನೆಯನ್ನು ನಾನೇಕೆ ಕೇಳಿದೆ ಎಂಬುದನ್ನೂ ನಿಮಗೆ ಹೇಳಿಬಿಡುತ್ತೇನೆ. ಆದರೆ, ಈ ನನ್ನ ಸೈಕಾಲಜಿ ಸ್ನೇಹಿತ ‘ಸ್ಟುಪಿಡ್, ಎಂಥಾ ಪ್ರಶ್ನೆ ಕೇಳ್ತಾ ಇದ್ದೀಯಾ? ಇದೊಂದು ಪ್ರಶ್ನೇನಾ? ನಿನ್ನ ಪ್ರಶ್ನೆಯ ಹಿನ್ನೆಲೆಯೇ ಸರಿಯಿಲ್ಲ’ ಎಂದುಬಿಟ್ಟ.

ಈ ತರಹದ ಇನ್ಸಲ್ಟ್ ನಾನು ನಿರೀಕ್ಷಿಸಿರಲಿಲ್ಲ. ಸರಿಯಿಲ್ಲದ ಪ್ರಶ್ನೆ ಕೇಳುವುದಕ್ಕೆ ನಾನೇನು ಲೂಸಾ? ಕೆಲವರಿಗೆ ಇಂತಹ ಅಭ್ಯಾಸ ಇದೆ. ನಾವು ಕೇಳಿದ ಪ್ರಶ್ನೆಗಳಿಗೆ ಸರಿಯಾದ ಉತ್ತರ ಕೊಡಲು ಸಾಧ್ಯವಾಗದಿದ್ದರೆ, ‘ಇದು ಪ್ರಶ್ನೆಯೇ ಅಲ್ಲ’ ಎಂದು ಎದುರಾಳಿಗಳನ್ನು ಅಧೀರರನ್ನಾಗಿ ಮಾಡುತ್ತಾರೆ. ಟಿ.ವಿ ಚಾನಲ್‌ಗಳಲ್ಲಿ ರಾಜಕಾರಣಿಗಳ ಸಂದರ್ಶನಗಳನ್ನು ನೋಡುತ್ತಿದ್ದರೆ ನಿಮಗೆ ಇದು ಚೆನ್ನಾಗಿ ಅರ್ಥವಾಗುತ್ತದೆ. ಪ್ರಶ್ನೆ ಎಂಥದ್ದೇ ಇರಲಿ, ಗುಡ್ ಕೊಶ್ಚನ್ ಎಂದು ಹೇಳಿ ನಂತರ ಬ್ಯಾಡ್ ಆನ್ಸರ್ ಕೊಡುತ್ತಾರೆ. ‘ಬಹಳ ಒಳ್ಳೆಯ ಪ್ರಶ್ನೆ ಕೇಳಿದಿರಿ’ ಎಂದು ಹೇಳುತ್ತಾ, ಪ್ರಶ್ನೆ ಕೇಳುವವನನ್ನು ಜಾಕ್ ಹಾಕಿ ಎತ್ತಲಾರಂಭಿಸುತ್ತಾರೆ. ಬಹಳ ಒಳ್ಳೆಯ ಪ್ರಶ್ನೆ ಕೇಳಿದಿರಿ ಅಂದ ತಕ್ಷಣ ಸಂದರ್ಶಕ ಮುಂದಿನ ಪ್ರಶ್ನೆಗಳ ಬಗ್ಗೆ ಜಾಗರೂಕನಾಗುತ್ತಾನೆ. ಮುಂದೆ ಯಾವ ಪ್ರಶ್ನೆ ಕೇಳಿ ಇವನಿಂದ ಶಹಬಾಷ್ ಗಿರಿ ಪಡೆಯಬಹುದು ಎಂದು ಯೋಚಿಸಲಾರಂಭಿಸುತ್ತಾನೆ. ಆಗ ಪ್ರಶ್ನೆ ಕೇಳುವವನ ಆವೇಶಕ್ಕೆ ಕೊಂಚವಾದರೂ ಕಡಿವಾಣ ಬೀಳುತ್ತದೆ. ಅದು ಸಾಧ್ಯವಾಗುವುದು ‘ಬಹಳ ಒಳ್ಳೆಯ ಪ್ರಶ್ನೆ’ ಎನ್ನುವ ಒಂದೇ ಮಾತಿನಿಂದ. ’ಎಂಥಾ ಪ್ರಶ್ನೆ ಇವರೇ... ಈ ಪ್ರಶ್ನೆಯೇ ಸರಿಯಿಲ್ಲ’ ಎಂದು ಹೇಳುವುದು ಕೂಡ ಅದೇ ತರಹ ಎದುರಾಳಿಗಳನ್ನು ಅಧೀರರನ್ನಾಗಿ ಮಾಡುವ ತಂತ್ರ ಎಂದೇ ನನ್ನ ಭಾವನೆ. ಈ ಅಂತರಂಗದ ಸಂಗತಿ ಬಹುಶಃ ಟಿ.ವಿ ಚಾನಲ್‌ಗಳಲ್ಲಿ ರಾತ್ರಿ ಒಂಬತ್ತರಿಂದ ಹತ್ತರವರೆಗೆ ಪಟ್ಟು ಹಿಡಿದು ಕುಳಿತು ಬಿಗ್‌ ಡಿಬೇಟ್ ಮಾಡುವ ನಿರೂಪಕರಿಗೆ ಗೊತ್ತಿದೆ ಎಂದೇ ಕಾಣುತ್ತದೆ. ಅದಕ್ಕೋಸ್ಕರವೇ ಎದುರಾಳಿ ಗುಡ್‌ ಕೊಶ್ಚನ್ ಎಂದು ಪ್ರಶಂಸಿಸುತ್ತಿದ್ದಂತೆಯೇ ಅವರು ಮತ್ತಷ್ಟು ಮಾತು ಮುಂದುವರಿಸುವುದಕ್ಕೆ ಅವಕಾಶವನ್ನೇ ಕೊಡದೆ, ತಾವೇ ಮತ್ತಷ್ಟು ಮಾತು ಶುರುವಿಟ್ಟುಕೊಳ್ಳುತ್ತಾರೆ. ಎದುರಾಳಿ ಹೌದೌದು ನಾನು ಹೇಳುವುದೇನೆಂದರೆ...ಎಂದು ಮತ್ತೆ ಮಾತನಾಡಲುದ್ಯುಕ್ತನಾಗುತ್ತಿದ್ದಂತೆ, ನಿರೂಪಕ ಮತ್ತೆ ತನ್ನ ವಾಚಾಳಿತನದಿಂದ ಚರ್ಚೆಗೆ ಕುಳಿತವರೆಲ್ಲರ ಬಾಯಿಬಡಿಯುತ್ತಾನೆ. ಅರ್ನಾಬ್‌ ಗೋಸ್ವಾಮಿ ಅಂಥವರ ಬಾಯಿಗೆ ಸಿಕ್ಕರಂತೂ ಕಿರುಚಿ ಕಿರುಚಿಯೇ ಎದುರಾಳಿ ತಲೆಸಿಡಿದು ಸಾಯುವಂತೆ ಮಾಡುತ್ತಾರೆ.

ನನ್ನ ಪ್ರಶ್ನೆಯನ್ನು ಕಸದ ಬುಟ್ಟಿಗೆ ಬಿಸಾಕಿ ಹೋಗಿದ್ದ ಸೈಕಾಲಜಿ ಗೆಳೆಯ ಮತ್ತೆ ನನ್ನ ಬಳಿ ಬಂದೇ ಬರುತ್ತಾನೆ ಎಂಬ ಖಾತ್ರಿ ನನಗಿತ್ತು. ಪ್ರಶ್ನೆ ಕೇಳಿದ ತಕ್ಷಣ, ಚಕ್ ಅಂತ ನನ್ನನ್ನು ಇನ್ಸಲ್ಟ್ ಮಾಡಿ ಹೋಗಿರಬಹುದು. ಆದರೆ ಅವನ ತಲೆ ಒಳಗೆ ನಾನು ಬಿಟ್ಟ ಹುಳ? ಅವನ ತಲೆ ಇಷ್ಟೊತ್ತಿಗೆ ಜಂಜಡದ ಗೂಡಾಗಿಬಿಟ್ಟಿರುತ್ತದೆ. ಇದು ಹೀಗೇ ಆಗುತ್ತದೆ ಎಂದು ನನಗೂ ಗೊತ್ತಿತ್ತು. ನಮ್ಮ ದೇವರ ಸತ್ಯ ನಮಗೆ ಗೊತ್ತಿರುವುದಿಲ್ಲವೇ? ಅವನಿಗೂ ಒಬ್ಬಾಕೆ ಹೆಂಡತಿಯಿದ್ದು, ಅವನೂ ಅವಳನ್ನು ಒಲಿಸಿಕೊಳ್ಳಲು ಯತ್ನಿಸಿರುವುದಿಲ್ಲವೇ? ಅವನು ನಾನು ನಿರೀಕ್ಷಿಸಿದಂತೆ ಬಂದೇ ಬಂದ.

‘ನಿನಗೆ ಸ್ವಲ್ಪ ಮಾನಸಿಕ ಪ್ರಾಬ್ಲಂ ಇದ್ದಂತಿದೆ ಸ್ವಲ್ಪ ನಿಮ್ಹಾನ್ಸ್ ಕಡೆ ಬಾ, ಯಾವುದಕ್ಕೂ ಚೆಕ್ ಮಾಡಿ ಬಿಡೋಣ’ ಎಂದು ನನ್ನ ಸೈಕಾಲಜಿ ಗೆಳೆಯ ಸೀರಿಯಸ್ಸಾಗಿಯೇ ಹೇಳಿದ.

ಮನಶ್ಯಾಸ್ತ್ರಜ್ಞರಾದ ಕೂಡಲೇ ಕೆಲವರಿಗೆ ಒಂಥರಾ ಕಾಯಿಲೆ ಶುರುವಾಗಿ ಬಿಡುತ್ತದೆ. ಎದುರು ಕಂಡವರೆಲ್ಲಾ ಅವರಿಗೆ ಮಾನಸಿಕ ರೋಗಿಗಳ ಹಾಗೆಯೇ ಕಾಣುತ್ತಿರುತ್ತಾರೆ! ಅವರೊಬ್ಬರನ್ನು ಬಿಟ್ಟು! ಇದು ಆಯಾಯ ವ್ಯವಹಾರ ಮಾಡುವವರ ದೃಷ್ಟಿ (ದೋಷ). ರಸ್ತೆಯಲ್ಲಿ ತರಕಾರಿ ಮಾರುವ ವ್ಯಾಪಾರಿಗೆ ರಸ್ತೆಯಲ್ಲಿ ಓಡಾಡುತ್ತಿರುವವರೆಲ್ಲಾ ನನ್ನ ಅಂಗಡಿಗೇ ತರಕಾರಿ ಕೊಳ್ಳಲು ಬರುತ್ತಿದ್ದಾರೆ ಎಂಬ ಭ್ರಮೆ. ಪೊಲೀಸನೊಬ್ಬನ ಕಣ್ಣಿಗೆ ಎಲ್ಲರೂ ಕಳ್ಳರ ಹಾಗೆ ಕಾಣುತ್ತಾರೆ. ‘ಒಳ್ಳೆಯವರೆಲ್ಲಾ ಜೈಲಿನಲ್ಲಿದ್ದಾರೆ, ಕಳ್ಳರೆಲ್ಲಾ ಹೊರಗಿದ್ದಾರೆ’ ಎಂದು ಸೆರೆಮನೆಯಲ್ಲಿರುವ ಕಳ್ಳನೊಬ್ಬ ವೇದಾಂತಿ ತರಹ ಹೇಳಿದನಂತೆ. ಇದನ್ನು ಜೋಕ್ ಎಂದು ತಿಳಿದು ನಕ್ಕು ಸುಮ್ಮನಾಗಬಹುದು. ಆದರೆ, ನನ್ನ ಸೈಕಾಲಜಿ ಗೆಳೆಯ ನನ್ನನ್ನು ಮೆಂಟಲ್ ಆಸ್ಪತ್ರೆಗೆ ಬಾ ಎಂದು ಕರೆದರೆ ಹೇಗೆ ಸುಮ್ಮನಿರುವುದು? ಇದನ್ನು ಜೋಕ್ ಎಂದು ಭಾವಿಸಿ ನಗುವುದಾದರೂ ಹೇಗೆ?

‘ಅಲ್ಲಯ್ಯಾ, ನಾನು ಯಾರ ತಲೆಯನ್ನೂ ತಿನ್ನಲಿಲ್ಲ. ಜಸ್ಟ್ ಒಂದು ಸಣ್ಣ ಪ್ರಶ್ನೆ ಕೇಳಿದೆ ಅಷ್ಟೇ. ನೀನು ಸೈಕಾಲಜಿ ಪಂಡಿತ ಆದುದರಿಂದ ಇದಕ್ಕೆ ಪರಿಹಾರ ಸಿಗಬಹುದು ಎಂಬ ಸಣ್ಣ ಆಸೆ ಇತ್ತು. ಈಗ ನಿನ್ ಮಾತು ಕೇಳಿದ ಮೇಲೆ ಅದೂ ಮಣ್ಣುಪಾಲಾಯಿತು. ಅಷ್ಟಕ್ಕೂ ನಾನು ಕೇಳಿದ ಸಿಂಪಲ್ ಮ್ಯಾಟರ್‌ನಲ್ಲಿ ಅಂತಹ ಘನಂದಾರಿ ತಪ್ಪಾದರೂ ಏನಿತ್ತು? ಹೆಂಡತಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂದು ತಾನೇ ಕೇಳಿದೆ? ಹೆಂಡತಿಯನ್ನು ಓಡಿಸಿಕೊಂಡು ಹೋಗುವುದು ಹೇಗೆ ಎಂದು ಕೇಳಿದೆನೇ?’ ಎಂದು ಸೈಕಾಲಜಿ ಸ್ನೇಹಿತನನ್ನು ದಬಾಯಿಸಿದೆ.

‘ನೋಡು, ನೋಡು, ಮತ್ತೆ ಮತ್ತೆ ತಪ್ಪು ಮಾಡ್ತಾ ಇದೀಯಾ... ಹೆಂಡತಿಯನ್ನು ಒಲಿಸಿಕೊಳ್ಳುವುದು ಹೇಗೆ ಎಂದು ಮೊದಲು ಕೇಳಿದೆ. ಈಗ ಓಡಿಸಿಕೊಂಡು ಹೋಗುವುದು ಹೇಗೆ ಎನ್ನುವ ಮಟ್ಟಕ್ಕೆ ಬಂದಿದ್ದೀಯಾ... ಯಾಕೋ ನಿನ್ನ ವಾಕ್ಯ ರಚನೆಯೇ ಮತ್ತೆ ಮತ್ತೆ ತಪ್ಪಾದ ಮಾರ್ಗದಲ್ಲಿ ಹೋಗುತ್ತಿದೆ. ವಾಟ್ ಡೂ ಯೂ ಮೀನ್’ ಎಂದು ಇಂಗ್ಲಿಷ್‌ನಲ್ಲಿ ಅರಚಿದ. ‘ಅಲ್ಲಯ್ಯಾ... ಹಿರಿಯರೆಲ್ಲಾ ಒಪ್ಪಿ, ಜಾತಕ ನೋಡಿ, ಸಪ್ತಪದಿ ತುಳಿದ ಮೇಲೆ ಅವಳು ನಿನ್ನವಳು. ನಿನ್ನನ್ನೇ ನಂಬಿ ಬಂದ ಹೆಂಡತಿ ಎಂದೇ ಅರ್ಥ. ಇಬ್ಬರೂ ಪರಸ್ಪರ ಒಲಿದೇ ಮದುವೆಯಾಗಿರುತ್ತೀರಲ್ಲವೇ? ಅಂದಮೇಲೆ ಮತ್ತೆ ಏಕೆ ಅವಳನ್ನು ಒಲಿಸಿಕೊಳ್ಳಬೇಕು? ಒಳ್ಳೆ ಲೂಸ್ ಗಿರಾಕಿಯಾಯ್ತಲ್ಲಾ...’ ಎಂದು ಸ್ನೇಹಿತ ಮುಖ ಸಿಂಡರಿಸಿದ.

‘ಅದೇ ಮಾರಾಯ... ನಂಬಿ ಬಂದವಳು ಎಂದು ನೀನು ಹೇಳ್ತಿಯಾ. ಆದ್ರೆ ಅವಳು ನಾನು ಏನೂ ಹೇಳಿದ್ರೂ ನಂಬಲ್ವಲ್ಲ! ನನಗೆ ನಂಬಿಕೆ ಇದೆ ಮಾರಾಯ. ಆದ್ರೆ ಅವಳು ನನ್ನ ಮೊಬೈಲನ್ನು ನಂಬಲ್ಲ.ನಾನು ಸ್ವಲ್ಪ ಮರೆಯಾದರೆ ಸಾಕು ಎಲ್ಲವೂ ಚೆಕ್ ಆಗುತ್ತೆ. ನನ್ನ ಫೇಸ್‌ಬುಕ್ ಫಾಲೋ ಅಗುತ್ತೆ. ವಾಟ್ಸ್‌ಆ್ಯಪ್ ಸ್ಕ್ಯಾನ್ ಆಗುತ್ತೆ. ರಾತ್ರಿ ತಡವಾಗಿ ಬಂದ್ರೆ ಕುಡಿದು ಬಂದಿದ್ದೀರಾ ಅಂತಾಳೆ, ಬೇಗ ಬಂದ್ರೆ ಯಾರೂ ಸಿಗಲಿಲ್ವೇನೋ ಅದಕ್ಕೆ ಬೇಗ ಬಂದ್ರಿ ಅಂತಾಳೆ. ಏತಿ ಅಂದ್ರೆ ಪ್ರೇತಿ ಅಂತಾಳೆ. ಮನೇ ಕೆಲಸವನ್ನೆಲ್ಲಾ ನಾನೇ ಮಾಡಬೇಕು.ಒಂದು ಹೆಲ್ಪ್ ಇಲ್ಲಾ. ಒಂದ್ಕಡೆ ಕರ‍್ಕೊಂಡೋಗೋ ಮಾತೇ ಇಲ್ಲ. ಏನ್ ಜೀವನಾನೋ ಎಂದು ರೇಗ್ತಾಳೆ.ಒಳ್ಳೇ ಗೋಳಪ್ಪಾ...

ಅದಕ್ಕೇ ಅಲ್ಲವೇ ನಾನು ಪ್ರಶ್ನೆ ಕೇಳ್ತಾ ಇರೋದು ಮಾರಾಯ...’ ಎಂದು ಸಂಕಟ ತೋಡಿಕೊಂಡೆ. ‘ಅದೆಲ್ಲಾ ಕಾಮನ್ ಬಿಡಪ್ಪ. ಸೀರಿಯಲ್‌ಗಳನ್ನು ನೋಡಿ ಅವರಿಗೂ ತಲೆ ಕೆಟ್ಟಿರುತ್ತೆ. ಗಂಡ ಮನೆಗೆ ಬಂದ ತಕ್ಷಣ ತಲೆಗೆ ಹೇಗೆ ಕುಕ್ಕಬೇಕು ಎನ್ನುವ ಐಡಿಯಾಗಳನ್ನೆಲ್ಲಾ ಕೊಡೋದೇ ಟಿ.ವಿ ಚಾನಲ್‌ಗಳಲ್ಲವೇ? ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳಬೇಡ. ಕೈಹಿಡಿದವಳೇ ಕೊನೆಯವರೆಗೂ. ’ಒಲವೇ ನಮ್ಮ ಬದುಕು’ ಎಂದು ನಿನ್ನ ಹೆಂಡತಿಗೆ ತಿಳಿಹೇಳು’ ಎಂದು ಸೈಕಾಲಜಿ ಗೆಳೆಯ ಉಪದೇಶಿಸಲಾರಂಭಿಸಿದ.

‘ಅಯ್ಯೋ ಬಿಡಪ್ಪ, ಐವತ್ತು ವರ್ಷದ ಹಿಂದಿನ ಇದೇ ಡೈಲಾಗನ್ನು ಮತ್ತೆ ಮತ್ತೆ ಹೇಳಿ ಚೆನ್ನಾಗಿ ಉಗಿಸಿಕೊಂಡಿದ್ದೇನೆ. ಒಲವೇ ನಮ್ಮ ಬದುಕು ಅಂತಾ ಎಷ್ಟು ದಿನಾಂತ ಹೇಳಿ ನನ್ನ ಯಾಮಾರಿಸ್ತೀರಿ, ‘ಒಲೆಯೇ ನನ್ನ ಬದುಕು’ ಆಗಿದೆ ಎಂದು ಮುನಿಸಿಕೊಂಡಳು’ ಎಂದು ಇರುವ ಫ್ಯಾಕ್ಟ್ ಬಿಚ್ಚಿಟ್ಟೆ. ಅಡುಗೆ ಮಾಡುವುದರಲ್ಲಿ ಫಿಫ್ಟಿ ಪರ್ಸೆಂಟ್, ಬಟ್ಟೆ ಒಗೆಯುವುದರಲ್ಲಿ ಫಿಫ್ಟಿ ಪರ್ಸೆಂಟ್, ಮನೆ ಕ್ಲೀನಿಂಗ್‌ನಲ್ಲಿ ಫಿಫ್ಟಿ ಪರ್ಸೆಂಟ್... ಹೀಗೆ ನನ್ನ ಜೀವನವೇ ಅರ್ಧ ಆಗೋಯ್ತು ಗೆಳೆಯಾ, ನಿಜ ಹೇಳು ಹೀಗೆ ಸದಾ ಮನೆ ಕೆಲಸ ಮಾಡಿಕೊಂಡು ಹೆಂಡತಿಯ ಹಿಂದೇನೇ ಇದ್ರೆ ಎಲ್ಲರೂ ನನ್ನ ಅಮ್ಮಾವ್ರ ಗಂಡ ಎನ್ನುವುದಿಲ್ಲವೇ?’ ಎಂದೆ.

‘ಈಗ ಕಾಲ ಬದಲಾಗಿದೆ ಮಾರಾಯ, ಗಂಡ- ಹೆಂಡತಿಗೆ ಈಕ್ವಲ್‌ ರೈಟ್ ಇದೆ. ಸಾಫ್ಟ್‌ವೇರ್ ಫ್ಯಾಮಿಲಿಗಳು ಬಂದ ಮೇಲೆ ಲೈಫ್ ಸ್ಟೈಲೇ ಚೇಂಜಾಗಿ ಹೋಗಿದೆ. ನಾವೂ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ಹೆಂಡತಿಯನ್ನು ಹೆಂಡತಿಯ ತರಹ ನೋಡದೆ, ಫ್ರೆಂಡ್ ತರಹ ನೋಡಬೇಕು. ಮನೆ ಕೆಲಸವನ್ನು ಹಂಚಿಕೊಂಡು ಮಾಡಿದರೆ ಸ್ವರ್ಗಕ್ಕೆ ಕಿಚ್ಚು ಹಚ್ಚಬಹುದು. ಅದನ್ನು ಬಿಟ್ಟು ಹಳೇ ಕಾಲದವನ ತರಹ ಹೆಂಡತಿ ಅಂದರೆ ಕಾಲು ಒತ್ತಬೇಕು ಎನ್ನುವ ಮನೋಭಾವವಿದ್ದರೆ ಬರಲು ಸೇವೆ ಗ್ಯಾರಂಟಿ. ಏನೋ ಸ್ವಲ್ಪ ಅಡ್ಜೆಸ್ಟ್ ಮಾಡಿಕೊಂಡು ಹೋಗು ಮಾರಾಯ’ ಎಂದು ಸೈಕಾಲಜಿ ಗೆಳೆಯ ಉಪದೇಶ ಮಾಡಿದ.

‘ಹ್ಞಾಂ.. ನೋಡಿದೆಯಾ... ನೀನೇ ಹೇಳುತ್ತಿದ್ದೀಯಾ ಅಡ್ಜೆಸ್ಟ್ ಮಾಡಿಕೊಂಡು ಹೋಗಬೇಕು ಎಂದು. ಅದನ್ನೇ ನಾನು ಒಲಿಸಿಕೊಳ್ಳಬೇಕು ಎಂದೆ ಅಷ್ಟೇ. ಹೆಂಡತಿ ಮುನಿಸಿಕೊಂಡು ತವರಿಗೆ ಹೋಗಿದ್ದಳು. ಸ್ವಲ್ಪ ದಿನಗಳ ನಂತರ ಗಂಡ ಅಲ್ಲಿಗೆ ಹೋಗಿ, ಅವಳ ಮನ ಒಲಿಸಿ ಅವಳನ್ನು ವಾಪಸು ಮನೆಗೆ ಕರೆತಂದ ಎನ್ನುವ ಸುದ್ದಿಗಳನ್ನು ಎಷ್ಟು ಓದಿಲ್ಲ?! ರಾಮ ಸೀತೆಯನ್ನು ಒಲಿಸಿಕೊಂಡ, ಕೃಷ್ಣ, ರಾಧೆಯನ್ನ ಒಲಿಸಿಕೊಂಡ. ಪಾರ್ವತಿಯನ್ನು ಒಲಿಸಿಕೊಳ್ಳಲು ಶಿವ ಎಷ್ಟು ಒದ್ದಾಡಿದ್ದಾನೆ! ಇದನ್ನೇ ನಾನು ಕೇಳಿದ್ದು, ಹೆಂಡತಿಯನ್ನು ಒಲಿಸಿಕೊಳ್ಳುವುದು ಹೇಗೆ ಅಂತ. ಅಷ್ಟಕ್ಕೇ ನೀನು ಸ್ಟುಪಿಡ್ ಅಂದು ಬಿಟ್ಟಲ್ಲಯ್ಯಾ... ಎಂದು ನಾನೂ ಸ್ವಲ್ಪ ಕಥೆ ಶುರು ಮಾಡಿದೆ. ಸಿಂಪಲ್ಲಾಗಿ ಒಂದು ವಿವರಣೆ ಕೊಡ್ತೀನಿ ನೋಡು, ಗಂಡಂದಿರು ಸಂಜೆ ಆಫೀಸಿನ ಕೆಲಸ ಮುಗಿಸಿ, ಮನೆಗೆ ಓಡುವಾಗ ದಾರಿಯಲ್ಲಿ ಒಂದು ಮೊಳ ಮಲ್ಲಿಗೆ ಹೂ, ಕಾಲು ಕೇಜಿ ಸ್ವೀಟ್‌ಬಾಕ್ಸ್ ಖರೀದಿಸಿ ಮನೆಯತ್ತ ಏಕೆ ಓಡುತ್ತಾರೆ? ಗಂಡಂದಿರು ಹೀಗೆ ಮಾಡುವ ಕೆಲಸವನ್ನು ನಮ್ಮ ಕಾದಂಬರಿಕಾರರು, ಕಥೆಗಾರರು ಎಷ್ಟು ಕಥೆ, ಕಾದಂಬರಿಗಳಲ್ಲಿ ಹೊಸೆದಿಲ್ಲ? ಸಾಹಿತ್ಯ ಎನ್ನುವುದು ನಮ್ಮ ಸಮಾಜದ ಪ್ರತಿಬಿಂಬವಲ್ಲವೇ? ನಡೆಯುವುದನ್ನೇ ಅಲ್ಲವೇ ಅವರು ಬರೆಯುವುದು? ಸಪ್ತಪದಿ ತುಳಿದು ಬಲಗಾಲಿಟ್ಟು ಒಳಬಂದ ಮೇಲೆ, ಸಂಜೆ ವೇಳೆ ಹೂ ತೆಗೆದುಕೊಂಡು ಮನೆಗೆ ಓಡಿ ಬರೋದು ಏಕೆ? ಇದು ಹೆಂಡತಿಯನ್ನು ಒಲಿಸಿಕೊಳ್ಳುವ ವಿಧಾನವೇ ಇರಬೇಕು ಎನ್ನುವುದು ನನ್ನ ವಿಶ್ಲೇಷಣೆ. ಇಷ್ಟು ಸಿಂಪಲ್ ಉತ್ತರ ಹೇಳೋಕೆ ಸೈಕಾಲಜಿ ಓದೋದು ಒಂದು ಕೇಡು ಎಂದು ಅವನನ್ನು ವೀರೋಚಿತವಾಗಿ ಹಂಗಿಸಿದೆ.

‘ಥೂ ನಿನ್ನ, ನಿನಗೆ ಒಲಿಸಿಕೊಳ್ಳುವುದು ಎಂಬುದರ ಅರ್ಥವೇ ಗೊತ್ತಿಲ್ಲ. ಪ್ರೀತಿಗೂ, ಒಲಿಸಿಕೊಳ್ಳುವುದಕ್ಕೂ ಬಹಳ ವ್ಯತ್ಯಾಸವಿದೆ. ಗಂಡ, ಹೆಂಡಿರ ನಡುವೆ ನಿಜವಾದ ಪ್ರೀತಿ ಒಂದು ಮೊಳ ಹೂ ತಂದುಕೊಡುವುದರಿಂದ ಬರುವುದಿಲ್ಲ. ತಲೆಯಲ್ಲಿ ಸಗಣಿ ತುಂಬಿಕೊಂಡಿರುವ ನಿನಗೆ ಹೇಳಿ ಏನು ಪ್ರಯೋಜನ? ಗಂಡ- ಹೆಂಡತಿ- ಒಲವು ಎನ್ನುವುದು ಚುನಾವಣೆ ಸಮಯದಲ್ಲಿ ರಾಜಕೀಯ ಪಕ್ಷಗಳು ಮಾಡಿಕೊಳ್ಳುವ ಆತುರದ ಮೈತ್ರಿ ತರಹ ಅಂದುಕೊಂಡಂತಿದೆ. ಅದು ಬಿಟ್ಟು ನಿನ್ನ ತಲೆಯಲ್ಲಿ ಬೇರೆಯದೇನೂ ಇಲ್ಲ’ ಎಂದು ಉಗಿದು ಉಪ್ಪಿನಕಾಯಿ ಹಾಕಿ, ಕಾಫಿ ಕುಡಿಯೋಣ ಬಾ ಎಂದು ಕರೆದುಕೊಂಡು ಹೋದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT