ಧಾರವಾಡ: ಮತದಾರರ ಜಾಗೃತಿ ಮತ್ತು ಮತದಾನದ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವ ಉದ್ದೇಶದಿಂದ ಅಂಗವಿಕಲರ ಸ್ಕೂಟರ್ ರ್ಯಾಲಿಯನ್ನು ಸೋಮವಾರ ಆಯೋಜಿಸಲಾಗಿತ್ತು.ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ ಸಮಿತಿ (ಸ್ವೀಪ್) ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಈ ರ್ಯಾಲಿಗೆ ಜಿಲ್ಲಾ ಚುನಾವಣಾಧಿಕಾರಿ ಡಾ. ಎಸ್.ಬಿ.ಬೊಮ್ಮನಹಳ್ಳಿ, ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಸ್ನೇಹಲ್ ರಾಯಮಾನೆ ಅವರು ಹಸಿರು ನಿಶಾನೆ ತೋರಿಸಿಸುವ ಮೂಲಕ ಜಾಗೃತಿ ಜಾಥಾಗೆ ಚಾಲನೆ ನೀಡಿದರು.ನಂತರ ಡಾ. ಬೊಮ್ಮನಹಳ್ಳಿ ಹಾಗೂ ಸ್ನೇಹಲ್ ತಾವೇ ಅಂಗವಿಕಲರನ್ನು ಕೂರಿಸಿಕೊಂಡು ವಾಹನ ಚಾಲನೆ ಮಾಡಿಕೊಂಡು ಕಲಾಭವನದಿಂದ ಸುಭಾಸ ರಸ್ತೆವರೆಗೂ ಸಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ವಾಹನಗಳಿಗೆ ‘ಮತದಾನ ಮಾಡಿದವರೇ ಮಹಾಶೂರ’, ಕಡ್ಡಾಯವಾಗಿ ಮತದಾನ ಮಾಡಿ ಎಂಬಿತ್ಯಾದಿ ಫಲಕ ಪ್ರದರ್ಶಿಸಿದರು.
ನಂತರ ಈ ಜಾಥಾ ಕೆಸಿಸಿ ಬ್ಯಾಂಕ್, ಮೇದಾರ ಓಣಿ, ರಾಮಮಂದಿರ, ಸಂಗಮ ವೃತ್ತ, ಲಕ್ಷ್ಮಿ ಚಿತ್ರಮಂದಿರ, ಆಲೂರು ವೆಂಕಟರಾವ್ ವೃತ್ತದ ಮೂಲಕ ಸಂಚರಿಸಿತು. ರ್ಯಾಲಿಯಲ್ಲಿ 150ಕ್ಕೂ ಹೆಚ್ಚು ಅಂಗವಿಕಲರು ತಮ್ಮ ವಾಹನಗಳೊಂದಿಗೆ ಜಾಥಾದಲ್ಲಿ ಪಾಲ್ಗೊಂಡು ಮತದಾನದ ಮಹತ್ವ ಸಾರಿದರು.
ಜಿಲ್ಲಾ ಅಂಗವಿಕಲರ ಕಲ್ಯಾಣ ಇಲಾಖೆ ಅಧಿಕಾರಿ ಅಮರನಾಥ, ಮಹಾನಗರಪಾಲಿಕೆ ಸಹಾಯಕ ಆಯುಕ್ತ ಜಿ.ಜಿ.ಹಿರೇಮಠ ಈ ಸಂದರ್ಭದಲ್ಲಿ ಹಾಜರಿದ್ದರು.