ಬೆಂಗಳೂರು: ರಾಮನಗರ ಜಿಲ್ಲಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕ (ಎಸ್ಡಿಎ) ಎಂ.ಮಹೇಶ್ಕುಮಾರ್ (31) ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದು, ಈ ಸಂಬಂಧ ಪೀಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎಚ್ಎಂಟಿ ಲೇಔಟ್ ನಿವಾಸಿಯಾದ ಮಹೇಶ್ಕುಮಾರ್, ನೆಲಗದರನಹಳ್ಳಿ ಮುಖ್ಯರಸ್ತೆಯಲ್ಲಿ ಏ.1ರಂದು ಮಧ್ಯಾಹ್ನ 4 ಗಂಟೆ ಸುಮಾರಿಗೆ ಸೈಕಲ್ನಲ್ಲಿ ಹೊರಟಿದ್ದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದರು.
‘ಡಿಸ್ಕವರಿ ಬೈಕ್ನಲ್ಲಿ (ಕೆಎ 13 ಇಸಿ 5039) ಬಂದಿದ್ದ ದುಷ್ಕರ್ಮಿಗಳಿಬ್ಬರು, ನನ್ನ ಸೈಕಲ್ಗೆ ಗುದ್ದಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಲು ಆರಂಭಿಸಿದ್ದರು. ಮುಖಕ್ಕೆ ಕೈಯಿಂದ ಗುದ್ದಿದ್ದರು. ಜಗಳ ಬಿಡಿಸಲು ಬಂದ ನನ್ನ ಮಾವ ಹೊನ್ನಪ್ಪರ ಮುಖಕ್ಕೂ ಗುದ್ದಿ ಗಾಯವನ್ನುಂಟು ಮಾಡಿದರು’ ಎಂದು ಮಹೇಶ್ ದೂರಿನಲ್ಲಿ ತಿಳಿಸಿದ್ದಾರೆ.
‘ಘಟನೆ ಬಗ್ಗೆ ದೂರು ನೀಡಿದರೆ, ನಿನ್ನನ್ನು ಸುಮ್ಮನೇ ಬಿಡುವುದಿಲ್ಲವೆಂದು ಜೀವ ಬೆದರಿಕೆವೊಡ್ಡಿ ಆರೋಪಿಗಳು ಪರಾರಿಯಾದರು’ ಎಂದು ಹೇಳಿದ್ದಾರೆ.
ಪೊಲೀಸರು, ‘ದೂರುದಾರರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಹಚ್ಚುತ್ತಿದ್ದೇವೆ. ಯಾವ ಕಾರಣಕ್ಕೆ ಹಲ್ಲೆ ಮಾಡಿದ್ದಾರೆ ಎಂಬುದು ಆರೋಪಿಗಳು ಸಿಕ್ಕ ಬಳಿಕ ಗೊತ್ತಾಗಲಿದೆ’ ಎಂದರು.