ದಾವಣಗೆರೆ: ಶಿವಮೊಗ್ಗದಲ್ಲಿ ಮಂಗಳವಾರ ನಡೆಸಿದ ರೋಡ್ ಶೋ ಮತ್ತು ಇತರ ಚುನಾವಣಾ ಪ್ರಚಾರ ಕಾರ್ಯಕ್ರಮಗಳಿಗೆ ನಿರೀಕ್ಷಿಸಿದಷ್ಟು ಜನ ಸೇರದ ಬಗ್ಗೆ ಜಿಲ್ಲಾ ಕಾಂಗ್ರೆಸ್ ಪಧಾಧಿಕಾರಿಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬಾಪೂಜಿ ಅತಿಥಿ ಗೃಹದಲ್ಲಿ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಗುಪ್ತ ಸಭೆ ನಡೆಸಿದ ರಾಹುಲ್ ಗಾಂಧಿ, ‘ಬಿಸಿಲು ನಿಮ್ಮೂರಲ್ಲಿ ಮಾತ್ರ ಇರುವುದೇ? ಇಡೀ ದೇಶದಲ್ಲೇ ಇದೆ’ ಎಂದು ಹೇಳಿದರು ಎನ್ನಲಾಗಿದೆ.
‘ಸರ್ಕಾರದ ಸಾಧನೆ, ಮಂತ್ರಿಗಳ ಕೆಲಸದ ಬಗ್ಗೆ ಹೇಳಬೇಡಿ. ಗೆಲ್ಲುವುದಕ್ಕೆ ಯಾವ ಸಮಸ್ಯೆಗಳಿವೆ ಎಂಬುದನ್ನು ತಿಳಿಸಿ’ ಎಂದೂ ದಾವಣಗೆರೆ ಕಾಂಗ್ರೆಸ್ ಪದಾಧಿಕಾರಿಗಳಿಗೆ ರಾಹುಲ್ ಗಾಂಧಿ ಸೂಚಿಸಿದರು.
ಯುವಕರನ್ನು ಪಕ್ಷಕ್ಕೆ ಸೆಳೆಯಲು ಹೇಗೆ ಕಾರ್ಯತಂತ್ರ ರೂಪಿಸಬೇಕು, ಪಕ್ಷದ ಬಲವರ್ಧನೆಗೆ ಏನೇನು ಕ್ರಮ ಕೈಗೊಳ್ಳಬೇಕು ಎಂಬ ಕುರಿತು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳಿಂದ ರಾಹುಲ್ ಗಾಂಧಿ ಮಾಹಿತಿ ಪಡೆದರು.
ಈ ಮಧ್ಯೆ, ಹರಿಹರದ ಹುತಾತ್ಮ ಯೋಧ ಜಾವೇದ್ ಅವರ ಕುಟುಂಬದವರು ರಾಹುಲ್ ಗಾಂಧಿ ಭೇಟಿಗಾಗಿ ದಾವಣಗೆರೆಗೆ ಆಗಮಿಸಿದ್ದಾರೆ.