ಚಿಕ್ಕಬಳ್ಳಾಪುರ: ಶಾಸಕ ಡಾ.ಕೆ.ಸುಧಾಕರ್ ಅವರ ಸಾಯಿಕೃಷ್ಣಾ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರದಲ್ಲಿ ನಿರ್ಮಿಸಿರುವ ‘ಅಮೃತಗಂಗೆ’ ಶುದ್ಧ ಕುಡಿಯುವ ನೀರಿನ 16 ಘಟಕಗಳಿಗೆ ಚುನಾವಣಾಧಿಕಾರಿಗಳು ಬುಧವಾರ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇಲೆ ಬೀಗ ಹಾಕಿದರು.ಸಹಾಯಕ ಚುನಾವಣಾಧಿಕಾರಿ ಕೆ.ನರಸಿಂಹಮೂರ್ತಿ, ನಗರಸಭೆ ಆಯುಕ್ತ ಉಮಾಕಾಂತ್ ಅವರ ನೇತೃತ್ವದ ತಂಡದ ಸಿಬ್ಬಂದಿ ನಗರದಾದ್ಯಂತ ಸಂಚರಿಸಿ ಘಟಕಗಳಿಗೆ ಬೀಗ ಹಾಕಿ, ಸೀಲ್ ಮಾಡಿತು. ಅಧಿಕಾರಿಗಳ ಈ ಕ್ರಮ ಖಂಡಿಸಿ ನಗರ ಪೊಲೀಸ್ ಠಾಣೆ ಬಳಿ ಇರುವ ಘಟಕದ ಎದುರು ಶಾಸಕರ ಬೆಂಬಲಿಗರು, ನಾಗರಿಕರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.