ಬಳ್ಳಾರಿ: ‘ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಏ.15ರವರೆಗೆ ನೀರು ಹರಿಸಬೇಕು ಎಂಬ ಕೋರಿಕೆಯ ಕುರಿತು ಏ.6ರ ಸಂಜೆಯೊಳಗೆ ಸ್ಪಷ್ಟ ನಿರ್ಧಾರ ಕೈಗೊಳ್ಳುವುದಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್ಕುಮಾರ್ ಅವರು ನೀಡಿದ ಭರವಸೆ ಮೇರೆಗೆ ರೈತರು ಅನಿರ್ದಿಷ್ಟ ಅವಧಿಯ ಉಪವಾಸ ಸತ್ಯಾಗ್ರಹವನ್ನು ಗುರುವಾರ ಸಂಜೆ ಕೊನೆಗೊಳಿಸಿದರು.ಬುಧವಾರ ಸತ್ಯಾಗ್ರಹ ಆರಂಭಿಸಿದ್ದ ರೈತ ಮುಖಂಡರಲ್ಲಿ ಕೆಲವರು ಗುರುವಾರ ಮಧ್ಯಾಹ್ನದ ಹೊತ್ತಿಗೆ ಅಸ್ವಸ್ಥರಾದಂತೆ ಕಂಡುಬಂದ ಕಾರಣ, ಜಿಲ್ಲಾ ಆಸ್ಪತ್ರೆಯ ವೈದ್ಯರು ಬಂದು ಆರೋಗ್ಯ ತಪಾಸಣೆ ನಡೆಸಿದರು. ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಆರ್.ಮಾಧವರೆಡ್ಡಿ, ಬಸವನಗೌಡ ಮತ್ತು ತಿಮ್ಮನಗೌಡ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರು.