ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೆಗಳ ನಡುವೆ ಚಿತ್ರ ಕಾವ್ಯ..

Last Updated 7 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

ಇಲ್ಲಿ ಪ್ರತೀ ಕಲ್ಲುಗಳೂ ವಿಸ್ಮಯದ ಕತೆಗಳನ್ನು ಉಸುರುತ್ತವೆ. ಅಡಿಗಡಿಗೂ ಶಾಸನಗಳ ಸರಮಾಲೆ. ಬಂಡೆಗಳ ನಡುವಿನಿಂದ ಬಿರುಬೇಸಿಗೆಯಲ್ಲೂ ತಂಪಾದ ನೀರ ಝರಿ ಒಸರುತ್ತದೆ. ಕಡಿದಾದ ಬಂಡೆ ತುದಿಯ ಮಂಟಪಗಳು, ಬಸವನ ಸಾಲು ಸಾಲು ಮೂರ್ತಿಗಳು... ಒಂದೇ ಎರಡೇ ಇಲ್ಲಿನ ವಿಸ್ಮಯಗಳ ಬೆನ್ನು ಹತ್ತಿ ಹೊರಟರೆ...

ನಿಲ್ಲಲೂ ಕಷ್ಟಪಡುವ ಬಂಡೆಗಳ ಮೇಲೆ ಬಸವನ ಮೂರ್ತಿಗಳನ್ನು ಕೆತ್ತಲಾಗಿದೆ. ಪರಸ್ಪರ ಮಾತಿನಲ್ಲಿ ತೊಡಗಿಕೊಂಡಿರುವಂತೆ ಭಾಸವಾಗುವ ಕಲ್ಲು ಬಂಡೆಗಳು. ನೆತ್ತಿ ಹತ್ತಿ ಕೆಳಗಿಣುಕಿದರೆ ತಲೆ ತಿರುಗುವಷ್ಟು ಆಳದ ಪ್ರಪಾತ. ಹೀಗೆ ಹಲವು ವಿಸ್ಮಯಗಳ ಒಡಲು ಶಿವಗಂಗೆ. ಈ ಬೆಟ್ಟ ಬೆಂಗಳೂರಿನಿಂದ ಕೇವಲ 53 ಕಿಲೋಮೀಟರ್ ದೂರದಲ್ಲಿದೆ. ಶಾಂತಲೆಯು ಸ್ವರ್ಗಸ್ಥಳಾಗಿದ್ದು ಇದೇ ಜಾಗದಲ್ಲಿ.

ಆ ಕ್ಷಣದಲ್ಲಿ ನಾವು ಶಾಂತಲೆ ಸ್ವರ್ಗಾರೋಹಣ ಮಾಡಿದ ಜಾಗದಲ್ಲಿದ್ದೆವು! ಸಾವಿಗೂ ಇಂತಹ ಸುಂದರ ಸ್ಥಳವೊಂದನ್ನು ಆಯ್ಕೆ ಮಾಡಿಕೊಂಡಳಲ್ಲ ಅವಳು... ಆ ಜಾಗದಲ್ಲಿ ನಿಂತಾಗ ಅವಳ ಸಾವು ನಮ್ಮನ್ನು ಬಹುವಾಗಿಯೇ ಕಾಡುವುದು. ಎಂಥವರನ್ನೂ ಮಂತ್ರ ಮುಗ್ಧಗೊಳಿಸುವ ಇಲ್ಲಿನ ಸೌಂದರ್ಯ ನೋಡಿಯೂ ಪರವಶಳಾಗದೆ ಅದು ಹೇಗೆ ಪ್ರಾಣ ಬಿಟ್ಟಳೆಂಬ ಪ್ರಶ್ನೆಯೊಂದು ಮನಸಲ್ಲಿ ಹಾದು ಹೋಗುವುದು. ಇಂತಹ ಹಲವು ಭಾವಗಳನ್ನು ಬದಿಗೊತ್ತಿ ಶಿವಗಂಗೆ ಎಂಬ ವಿಸ್ಮಯಕಾರಿ ಬೆಟ್ಟವನ್ನು ಹತ್ತಲು ತೊಡಗಿದೆವು.

ಬೆಂಗಳೂರಿಂದ ಕನಕಪುರ ರಸ್ತೆಯಲ್ಲಿ ಸಿಗುವ ದಾಬಸ ಪೇಟೆಯಲ್ಲಿ ಎಡಕ್ಕೆ ತಿರುಗಿಕೊಳ್ಳಬೇಕು. ಅಲ್ಲಿಂದ ಮೂರು ಕಿಲೋ ಮೀಟರ್ ದೂರದಲ್ಲಿ ಈ ಬೆಟ್ಟವಿದೆ.

ಅನತಿ ದೂರದಿಂದ ನೋಡುವವರಿಗೆ ಒಂದು ಸಾಧಾರಣ ಊರಂತೆ ತೋರಿದರೂ ರಸಿಕರಿಗೆ ಉಣ ಬಡಿಸುವ ವಿಶೇಷ, ವೈಶಿಷ್ಟ್ಯ, ವಿಸ್ಮಯಗಳು, ವಿಸ್ಮಯಕಾರಿ ಲಿಂಗ, ಗುಹಾಂತರ ದೇವಾಲಯಗಳು ಒಂದೆರಡಲ್ಲ. ಅಡಿಗಡಿಗೂ ಬಂಡೆಗಳ ಚಿತ್ರ ಕಾವ್ಯದಂತೆ ಕಾಣುವುದು. ಎದುರಿನ ಚಿತ್ರಗಳು ಕ್ಯಾಮೆರಾದೊಂದಿಗೇ ಸ್ಪರ್ಧೆಗಿಳಿಯುವಷ್ಟು ಸೊಗಸು.

(ಶಿವಗಂಗೆ ಬೆಟ್ಟ)

ಬೆಟ್ಟದ ಬಸವ

ನೋಡಿದರೆ ಬಸವಳಿಯಬೇಕು ಅಷ್ಟು ಎತ್ತರದಲ್ಲಿದ್ದಾನೆ ಈ ಬಸವ. ನಿಶ್ಚಿಂತೆಯಿಂದ ಮಹಾಪ್ರಪಾತವೊಂದಕ್ಕೆ ಬೆನ್ನಿಟ್ಟು ಕುಳಿತಿದ್ದಾನೆ! ಯಾವ ಶಿಲ್ಪಿ ಕಡೆದನೋ ಇದನ್ನು. ಏಕಶಿಲಾ ಬಸವನಿಗೆ ಸುತ್ತು ಬರಲು ಬಲು ಎದೆಗಾರಿಕೆಯೇ ಬೇಕು. ಅಂತಹ ಎತ್ತರದ ಜಾಗದಲ್ಲಿ ನಿಲ್ಲುವುದೇ ಕಷ್ಟವಾದ ಸ್ಥಳದಲ್ಲಿ ಸುಂದರ ಶಿಲ್ಪ ಕೆತ್ತುವುದು ಸಾಮಾನ್ಯ ಸಂಗತಿಯಲ್ಲ. ಏರುವ ಬರದಲ್ಲಿ ಬಂಡೆಯಿಂದ ಜಾರದಿರಿ ಜೋಕೆ. ಬಂಡೆಯಲ್ಲಿ ಶಾಸನವೊಂದನ್ನು ಕೆತ್ತಿದ್ದಾನೆ ಶಿಲ್ಪಿ. ಬಸವನ ಸುತ್ತ ಕಬ್ಬಿಣದ ಕಂಬಗಳನ್ನು ಇತ್ತೀಚೆಗೆ ನಿರ್ಮಿಸಲಾಗಿದೆ.

ಮಕ್ಕಳಾಗದೇ ಇರುವವರು ಬಸವನಿಗೆ ಪ್ರದಕ್ಷಿಣೆ ಹಾಕಿದರೆ ಮಕ್ಕಳಾಗುತ್ತವೆ ಎನ್ನುವ ನಂಬಿಕೆಯೂ ಸ್ಥಳೀಯರಲ್ಲಿ ಇದೆ. ಶಿಖರದ ನೆತ್ತಿ ಸಪಾಟಾಗಿದೆ. ಅಲ್ಲೆರಡು ಸ್ತಂಭಗಳನ್ನು ಕೆತ್ತಿ ನಿಲ್ಲಿಸಲಾಗಿದೆ. ಒಂದು ವಿಶಿಷ್ಟ ವಿನ್ಯಾಸದ ತೀರ್ಥ ಸ್ತಂಭ. ಸಂಕ್ರಾತಿಯ ದಿನ ಇದರ ಸನಿಹ ತೀರ್ಥ ಉದ್ಭವವಾಗುವುದು. ಇನ್ನೊಂದು ಅಷ್ಟಕೋನದಲ್ಲಿರುವ ತೀರ್ಥ ಸ್ತಂಭ. ಇನ್ನೇನು ಆಗಸ ಮುಟ್ಟಿತೆನ್ನುವ ಹಾಗೆ ಶತಮಾನಗಳ ಗಾಳಿ, ಬಿರುಗಾಳಿಗೆ ಸಾಕ್ಷಿಯಾಗಿ ಮೈಯೊಡ್ಡಿ ನಿಂತಿದೆ. ಯಾವ ಕಂಬವನ್ನೂ ಹುಗಿಯದೇ ನಿಲ್ಲಿಸಲಾಗಿದೆ.

ಶಿಖರದಿಂದ ನೋಡಿದರೆ ಎಲ್ಲೆಲ್ಲೂ ಬಂಡೆಗಳ ಚಿತ್ತಾರವೇ ಕಾಣಿಸುತ್ತದೆ. ಕೆಳಗಿನ ಹಲವು ಬಂಡೆಗಳ ಮೇಲೂ ಬಸವನನ್ನು ಕೆತ್ತಿ ಕೂರಿಸಲಾಗಿದೆ. ಕೆಲವು ಕಡೆಗಳಲ್ಲಿ ಕಲ್ಲಿನ ಮಂಟಪವನ್ನೂ ನಿರ್ಮಿಸಿದ್ದಾರೆ. ಇಳಿಸಂಜೆಗೆ ಈ ಬಂಡೆಗಳು ಆಗಸದೊಂದಿಗೆ ನಡೆಸುವ ವರ್ಣ ವಿರಾಸತ್ ಬಣ್ಣಿಸಲಸದಳವು. ಹಾವುರಾಣಿ, ಮೊಲಗಳು ಅವನ್ನು ಬೇಟೆಯಾಡುವ ಬೇಟೆ ಪಕ್ಷಿಗಳೂ ಸಾಕಷ್ಟಿವೆ.
ಒಂದು ಪ್ರಾಣಿಯನ್ನು ಮರೆತೇ ಬಿಟ್ಟೆ. ಮಂಗಗಳು. ನಿಮ್ಮ ಕೈ ಚೀಲ, ಬೆನ್ನಿನ ಚೀಲವೆರಡೂ ಅವುಗಳ ಕೃಪಾ ಕಟಾಕ್ಷದಿಂದ ಉಳಿದರೆ ಅದೇ ಪುಣ್ಯ. ಪೆಪ್ಸಿ, ಮಿರಿಂಡಾಗಳನ್ನವು ಕುಡಿಯುವ ರೀತಿ ನೋಡಬೇಕು. ಶಿಖರದಿಂದ ಇಳಿವ ಇಳಿಜಾರಿನಲ್ಲಿ ನನ್ನ ಬೆನ್ನ ಚೀಲಕ್ಕೂ ಕೈಹಾಕಿ ನಾನು ಬೀಳುವಂತೆ ಮಾಡಿತು ಒಂದು ಮಂಗ. ಬೆಟ್ಟವಿಳಿಯುವ ಸ್ಥಳೀಯ ಪುಣ್ಯಾತ್ಮರೊಬ್ಬರು ಮಂಗಕ್ಕೆ ಜಬರಿಸಿ ಬಿಡಿಸಿದರು.

ವಿಸ್ಮಯಕಾರಿ ಒರಳು ಕಲ್ಲು ತೀರ್ಥ

ಒನಕೆ ಕಿಂಡಿಯ ದಾಟಿ ಶಿಖರದಿಂದ ಕೆಳಗಿಳಿದು ಶಿರ ಬಗ್ಗಿಸಿ ವಿಶಿಷ್ಟ ವೀರಭದ್ರ ದೇವಾಲಯದೊಳ ಹೊಕ್ಕೆವು. ಕಡು ಬೇಸಿಗೆಯಲ್ಲೂ ಹರಿವ ಇಲ್ಲಿನ ಒರಳು ಕಲ್ಲು ತೀರ್ಥವೇ ಒಂದು ಪ್ರಕೃತಿಯ ವಿಸ್ಮಯ. ದೊಡ್ಡ ಬಂಡೆಯ ಕೆಳಗೆ ಹರಿವ ನೀರನ್ನು ಒಂದು ಸಣ್ಣ ರಂಧ್ರ ಕೊರೆದಂತಿರುವ ತೀರ್ಥದಲ್ಲಿ ಕೈ ಹಾಕಿ ಸ್ಪರ್ಶಿಸಬೇಕು. ಎರಡು ಎರಡೂವರೆ ಅಡಿ ಆಳದಲ್ಲಿ ನೀರ ಹರಿವಿರುವುದು. ಪುಣ್ಯವಂತರಿಗೆ ಮಾತ್ರ ನೀರು ಕೈಗೆಟುಕುತ್ತದೆ ಎನ್ನುತ್ತಾರೆ ಬಲ್ಲವರು. ನನಗಂತೂ ಸ್ವಲ್ಪ ಕಷ್ಟದಲ್ಲೇ ಕೈಗೆಟುಕಿತು!

ಇಲ್ಲಿಂದ ದಾರಿ ನಡುವಿನ ದೊಡ್ಡ ಬಸವ, ಕುಂಬಾವತಿ ತೀರ್ಥ, ಚಿಗಟಣ ಗವಿ, ಎಮ್ಮೆ ಬಸವನನ್ನು ಹಾದು ಪ್ರಸನ್ನ ಗಂಗಾಧರೇಶ್ವರ ಗುಹಾಲಯವನ್ನು ತಲುಪಿದೆವು. ಕುಂಬಾವತಿ ತೀರ್ಥದಲ್ಲಿ ಹರಿದು ಬರುವ ನೀರನ್ನೇ ಗವಿ ಮಠದ ದಾಸೋಹಕ್ಕೆ ಬಳಸಲಾಗುತ್ತದೆ ಎಂದರೆ ಇಲ್ಲಿ ಈ ಬೆಟ್ಟದಲ್ಲಿ ಹರಿವ ನೀರಿನ ಪ್ರಮಾಣವನ್ನು ನೀವು ಅಂದಾಜಿಸಬಹುದು.

(ಬೆಟ್ಟದ ಮೇಲಿನ ನಂದಿ)

ತುಪ್ಪ ಬೆಣ್ಣೆಯಾಗುವ ಸೋಜಿಗ

ತಲೆತಗ್ಗಿಸಿ ಒಳಹೊಕ್ಕೆವು. ಒಳ ಹೊರಗಿಗೂ ಸುಮಾರು 5 ಡಿಗ್ರಿ ವ್ಯತ್ಯಾಸ. ಕೃಷ್ಣ ದೇವರಾಯನ ಕಂಬ ಶಾಸನವೊಂದನ್ನು ನೋಡಿ ಒಳ ಹೊಕ್ಕರೆ ಕಣ್ಣು ಕತ್ತಲಿಗೆ ಚಡಪಡಿಸುತ್ತೆ. ಪ್ರಸನ್ನ ಗಂಗಾಧರ ಲಿಂಗರೂಪಿಯಾಗಿದ್ದಾನೆ. ಲಿಂಗದ ಮೇಲೆ ಬೆಣ್ಣೆ ಸವರಿದರೆ ಅದು ತುಪ್ಪವಾಗುವುದಂತೆ!

ಲಿಂಗದೆದುರಿಗೊಂದು ಸುರಂಗವಿದೆ. ಕೆಂಪೇಗೌಡರು ಈ ಸುರಂಗ ಮಾರ್ಗವಾಗಿಯೇ ಗವಿ ಗಂಗಾಧರೇಶ್ವರ ದೇವಾಲಯಕ್ಕೆ ಹೋಗಿ ಬರುತ್ತಿದ್ದರಂತೆ! ಹೋಗಿ ನೋಡೋಣವೆಂದರೆ ಅದೀಗ ಮುಚ್ಚಿದೆ.

ಇಲ್ಲಿಂದ ಕೆಲವು ಮೆಟ್ಟಿಲುಗಳ ಅಂತರದಲ್ಲಿ ಹೊನ್ನಾದೇವಿ ಮಂದಿರವಿದೆ. 40 ಅಡಿ ಚಚ್ಚೌಕದ ದೇವಾಲಯ. ಹೊನ್ನಾದೇವಿ ಪೂರ್ವಾಭಿಮುಖವಾಗಿದ್ದಾಳೆ. ಈ ದೇವಾಲಯವನ್ನು ಹೊಯ್ಸಳರು ವಿಸ್ತರಿಸಿದ್ದಾರೆ ಎಂದು ಇಲ್ಲಿನ ದಾಖಲೆಗಳು ಹೇಳುತ್ತವೆ.

ಪಾತಾಳಗಂಗೆ ಎಂಬ ವಿಸ್ಮಯ

ಪಾತಾಳಗಂಗೆಯ ನೀರು ಮಳೆಗಾಲದಲ್ಲಿ ಕೆಳಗೆ ಬೇಸಿಗೆಯಲ್ಲಿ ಮೇಲೇರುವುದು ನೋಡುವುದೊಂದು ವಿಸ್ಮಯ! ಪಾತಾಳ ಗಂಗೆಗೂ ಬೆಟ್ಟದ ಪಶ್ಚಿಮಕ್ಕಿರುವ ಅಂತರಗಂಗೆ ಎಂಬ ತೀರ್ಥಕ್ಕೂ ಜಲ ಸಂಬಂಧವಿದೆ ಎನ್ನುತ್ತಾರೆ ಸ್ಥಳೀಯರು. ಪಕ್ಕದಲ್ಲೇ ಆದಿ ಶಂಕರರ ಗವಿ ಇದೆ! ಊರಿನ ಮನೋಹರ ಚಿತ್ರವೊಂದು ನಿಮ್ಮ ಕಣ್ಣಿಗೆ ಬೀಳುವುದು.

ಪೂರ್ಣ ಬೆಟ್ಟವಿಳಿದು ಬಂದರೆ ಕೆಳಗೆ ಕಲ್ಯಾಣಿ ಇದೆ. ಕಲ್ಯಾಣಿಯ ಸುತ್ತಲೂ ಅನೇಕ ಲಿಂಗಗಳನ್ನು ಸ್ಥಾಪಿಸಲಾಗಿದೆ. ಪ್ಲಾಸ್ಟಿಕ್‍ಮಯವಾದ ಕೆರೆ ಮಾನವನ ಬೇಜವಾಬ್ದಾರಿತನಕ್ಕೆ ಸಾಕ್ಷಿ ಹೇಳುತ್ತದೆ.

ಮಳೆಗಾಲದಲ್ಲಿ ಬೆಟ್ಟ ಏರುವವರು ಒಂದು ಹೆಜ್ಜೆ ತಪ್ಪಿದರೂ ಸಾವಿಗೆ ಆಹ್ವಾನ. ಇಲ್ಲಿನ ಪಿಸುಗುಡುವ ಬಂಡೆಗಳ ಮೌನದ ಮಾತನ್ನು ಆಲಿಸ ಬಯಸುವ ಚಾರಣಿಗರು ತಡ ಮಾಡದೇ ಹೊರಡಿ. ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT