ಮಲೆ ಮಹದೆಶ್ವರ ಬೆಟ್ಟ: ರಾಜ್ಯದಲ್ಲಿ ಬೋವಿ ವಡ್ಡರು 40 ಲಕ್ಷ ಮಂದಿ ಇದ್ದರೂ ರಾಜಕೀಯ ಪಕ್ಷಗಳು ನಮ್ಮನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನವನ್ನು ಮಾಡುತ್ತಿಲ್ಲ ಎಂದು ಭೋವಿ ಅಖಿಲ ಕರ್ನಾಟಕ ಭೋವಿ(ವಡ್ಡರ) ಯುವಕ್ರಾಂತಿ ಸಂಘದ ರಾಜ್ಯಾಧ್ಯಕ್ಷ ಕೊಟ್ರೇಶಿ ಬೇಸರ ವ್ಯಕ್ತಪಡಿಸಿದರು.
ಸಮೀಪದ ವಡ್ಡರದೊಡ್ಡಿ (ದೊಮ್ಮನಗದ್ದೆ) ಗ್ರಾಮದಲ್ಲಿ ಭಾನುವಾರ ಏರ್ಪಡಿಸಿದ್ದ ಸಿದ್ಧರಾಮೇಶ್ವರರ 846 ನೇ ಜಯಂತ್ಯುತ್ಸವ ಮತ್ತು ಗುರುವಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನವದೆಹಲಿಯ ರಾಮಲೀಲಾ ಮೈದಾನದಲ್ಲಿ ಸುಮಾರು 5ಲಕ್ಷ ಜನರನ್ನು ಸೇರಿಸಿ ಭೋವಿ ವಡ್ಡರ ಬೃಹತ್ ಸಮಾವೇಶ ನಡೆಸಿ ನಮ್ಮ ಶಕ್ತಿಯನ್ನು ತೋರಿಸಿದ್ದೇವೆ. ಆದರೂ ಅಸಂಘಟಿತರು ಎಂಬ ಕುಂಟುನೆಪ ಹೇಳಿಕೊಂಡು ನಮ್ಮ ಸಮುದಾಯವನ್ನು ರಾಜಕೀಯ ಪಕ್ಷಗಳು ಕಡೆಗಣಿಸುತ್ತಿವೆ’ ಎಂದು ಆರೋಪಿಸಿದರು.
ಹಿಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಮಾತನಾಡಿ, ಸಮುದಾಯದವರು ಸಂಘಟಿತರಾಗಿ ಉತ್ತಮ ಬದುಕನ್ನು ಕಟ್ಟಿಕೊಂಡು, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಿ ಮುಖ್ಯವಾಹಿನಿಗೆ ತರುವ ಮೂಲಕ ಸಮಾಜದ ಏಳಿಗೆಗೆ ಶ್ರಮಿಸಿ ಎಂದು ಸಲಹೆ ನೀಡಿದರು. ವಡ್ಡ ಪದವನ್ನು ಬಳಸುವುದನ್ನು ಬಿಟ್ಟು ಭೋವಿ ಪದವನ್ನೇ ಬಳಸಬೇಕು ಎಂದು ಹೇಳಿದರು.
ರಾಮಾಪುರ ಗ್ರಾಮದಿಂದ ಸ್ವಾಮೀಜಿಯನ್ನು ಬೆಳ್ಳಿರಥದಲ್ಲಿ ಮಂಗಳವಾದ್ಯ ಸಹಿತವಾಗಿ ಮೆರವಣಿಗೆಯಲ್ಲಿ ಕರೆತರಲಾಯಿತು. ಪೂರ್ಣಕುಂಭಗಳನ್ನು ಹೊತ್ತ ಮಹಿಳೆಯರು ಅವರನ್ನು ಸ್ವಾಗತಿಸಿದರು.
ಭೋವಿಜನಾಂಗದ ಮುಖಂಡ ಮಹೇಶ್ ಕುಮಾರ್, ಮೈಸೂರು ಜಿಲ್ಲಾ ಘಟಕದ ಸಂಘಟನಾ ಕಾರ್ಯದರ್ಶಿ, ಮಣಿ, ಕೃಷ್ಣ , ಜಿಲ್ಲಾಧ್ಯಕ್ಷ ರಾಜಣ್ಣ ಎಸ್.ಆರ್ ಮಹದೇವು, ಗ್ರಾಮಘಟಕದ ಅಧ್ಯಕ್ಷ ಗೋವಿಂದರಾಜು, ತಾಲ್ಲೂಕು ಘಟಕದ ಕಾರ್ಯದರ್ಶಿ ಬಿ ಗೋವಿಂದ, ರವಿಚಂದ್ರನ್, ಶಶಿಕುಮಾರ್ ಇದ್ದರು.