ಶಿವಮೊಗ್ಗ: ‘ರಾಜ್ಯದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಲ್ಲ, ಅದು ಸಿದ್ದರಾಮಯ್ಯ’ ಎಂದು ‘ನಮ್ಮ ಕಾಂಗ್ರೆಸ್’ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವರ್ತೂರು ಪ್ರಕಾಶ್ ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಸಿದ್ದರಾಮಯ್ಯ ಸರ್ಕಾರ ವನ್ನು 10 ಪರ್ಸೆಂಟ್ ಸರ್ಕಾರ ಎಂದು ಟೀಕಿಸಿರುವುದರಲ್ಲಿ ಸತ್ಯವಿದೆ. ಯಡಿಯೂರಪ್ಪ ಮುಖ್ಯಮಂತ್ರಿ ಯಾಗಿದ್ದಾಗ ನೇರವಾಗಿ ಹಣ ಪಡೆದು ಸಿಕ್ಕಿಬಿದ್ದಿದ್ದಾರೆ. ಆದರೆ ಸಿದ್ದರಾಮಯ್ಯ ಪ್ರತಿಯೊಂದರಲ್ಲೂ ಕಮಿಷನ್ ಪಡೆದಿದ್ದರೂ ಜಾಣತನ ತೋರಿದ್ದಾರೆ. ಭ್ರಷ್ಟಾಚಾರ ನಡೆಸಿ ರುವುದಕ್ಕೆ ಸಾಕ್ಷಿಯನ್ನೇ ಬಿಟ್ಟಿಲ್ಲ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಅಹಿಂದ ಹೆಸರು ಹೇಳಿಕೊಂಡು ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ಆನಂತರ ಅಹಿಂದ ವರ್ಗದವರಿಗೆ ಸ್ಥಾನಮಾನ ನೀಡದೇ ವಂಚಿಸಿದ್ದಾರೆ. ಸಾಮಾಜಿಕ ನ್ಯಾಯ ಕೊಡುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಡವಿದ್ದಾರೆ. ಅಲ್ಲದೆ ಕೋಮು ಗಲಭೆ ಸೃಷ್ಟಿಸಿ ಮತ ಕೇಳುವ ಬಿಜೆಪಿ ಈ ಹಿಂದೆ ರಾಜ್ಯದಲ್ಲಿ ಅಧಿಕಾರ ನಡೆಸಿ ಅಭಿವೃದ್ಧಿ ಕಡೆಗಣಿಸಿದೆ. ಈ ಎರಡೂ ರಾಷ್ಟೀಯ ಪಕ್ಷಗಳನ್ನು ಮತದಾರರು ತಿರಸ್ಕರಿಸಬೇಕು ಎಂದರು.
ಮುಂದಿನ ಹೊಸ ಸರ್ಕಾರ ರಚನೆಯಲ್ಲಿ ‘ನಮ್ಮ ಕಾಂಗ್ರೆಸ್’ ಪಕ್ಷ ನಿರ್ಣಾಯಕ ಪಾತ್ರ ವಹಿಸಲಿದೆ. ರಾಜ್ಯದೆಲ್ಲೆಡೆ ಗೆಲುವು ಸಾಧಿಸುವ ಕ್ಷೇತ್ರಗಳನ್ನು ಗುರುತಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗುವುದು. ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಪಕ್ಷವು ಹೊಸ ಸರ್ಕಾರ ರಚನೆಯಲ್ಲಿ ನಿರ್ಣಾ ಯಕ ಪಾತ್ರ ವಹಿಸಲಿದೆ ಎಂದರು.
ಸಮೀವುಲ್ಲಾ ಸ್ಪರ್ಧೆ: ಶಿವಮೊಗ್ಗ ನಗರದಿಂದ ಸಮೀವುಲ್ಲಾ ‘ನಮ್ಮ ಕಾಂಗ್ರೆಸ್’ ಪಕ್ಷದಿಂದ ಸ್ಪರ್ಧಿಸುತ್ತಿದ್ದಾರೆ. ಶಿವಮೊಗ್ಗದ ಎಲ್ಲಾ ನಾಗರಿಕರು ಮುಖ್ಯವಾಗಿ ಅಹಿಂದ ವರ್ಗದವರು ಹಾಗೂ ಅಲ್ಪಸಂಖ್ಯಾತರು ಸಮೀವುಲ್ಲಾ ಅವರಿಗೆ ಮತ ನೀಡುವ ಮೂಲಕ ಗೆಲ್ಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಸಮೀವುಲ್ಲಾ, ಸಾಮಿಲ್ ಪಾಷಾ, ಸಯ್ಯದ್ ಮಸೂದ್, ರಾಘವೇಂದ್ರ, ಪ್ರಶಾಂತ್, ಫಾರೂಕ್ ಷರೀಫ್ ಇದ್ದರು.