ಧಾರವಾಡ: ಮತದಾರರಿಗೆ ವ್ಯವಸ್ಥಿತ ಶಿಕ್ಷಣ ಹಾಗೂ ಸಹಭಾಗಿತ್ವ (ಸ್ವೀಪ್) ಕಾರ್ಯಕ್ರಮದಡಿ ಬುಧವಾರ ಬೆಳಿಗ್ಗೆ ನಗರದ ವಿವಿಧ ಪ್ರದೇಶಗಳಲ್ಲಿ ಆಗಸದಿಂದ ಪ್ಯಾರಾ ಮೋಟರ್ ಗ್ಲೈಡಿಂಗ್ ಮೂಲಕ ಮತದಾರರಿಗೆ ಜಾಗೃತಿ ಸಂದೇಶ ಸಾರಲಾಯಿತು.
ಮಹಾರಾಷ್ಟ್ರದ ಆಲ್ಫಾಲೈಟ್ ಏವಿಯೇಷನ್ಸ್ ಸಂಸ್ಥೆಯ ಕ್ಯಾಪ್ಟನ್ ನಿತ್ಯಾನಂದ ನಾಯಕವಾಡಿ ಅವರು, ಕರ್ನಾಟಕ ಕಾಲೇಜು ಮೈದಾನದಿಂದ ಬೆಳಿಗ್ಗೆ ಗ್ಲೈಡಿಂಗ್ ಮೂಲಕ ಯಶಸ್ವಿಯಾಗಿ ಆಗಸಕ್ಕೇರಿ ಮತದಾರರ ಜಾಗೃತಿ ಪತ್ರಗಳನ್ನು ಕೆಳಕ್ಕೆ ಎಸೆದರು.
ಆಗಸದಿಂದ ಹಾರಿ ಬರುತ್ತಿದ್ದ ಕರಪತ್ರಗಳನ್ನು ಕಂಡು ಬೆಳಗಿನ ವಾಯುವಿಹಾರಕ್ಕೆ ಬಂದಿದ್ದ ಜನರು, ಮೈದಾನದಲ್ಲಿ ಕಸರತ್ತು ನಡೆಸುತ್ತಿದ್ದ ಕ್ರೀಡಾಪಟುಗಳು ಕುತೂಹಲದಿಂದ ಹಿಡಿದು ಓದಿದರು.
ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸ್ನೇಹಲ್ ರಾಯಮಾನೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ವಿಧಾನಸಭಾ ಚುನಾವಣೆಯಲ್ಲಿ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸಬೇಕು’ ಎಂದು ಮನವಿ ಮಾಡಿದರು
ವಾರ್ತಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಮಂಜುನಾಥ ಡೊಳ್ಳಿನ, ಪಾಲಿಕೆ ವಲಯ 2ರ ಸಹಾಯಕ ಆಯುಕ್ತ ಜಿ.ಜಿ.ಹಿರೇಮಠ, ಪರಿಸರ ಎಂಜಿನಿಯರ್ ಸರೋಜ ಪೂಜಾರ, ಜಿ.ಎನ್.ಗುತ್ತಿ ಇದ್ದರು.