ವಿಟ್ಲ: ಪುತ್ತೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ವಿಟ್ಲದ ಹಲವು ಮತಗಟ್ಟೆಗಳಲ್ಲಿ ಮತಯಂತ್ರ ಬಳಕೆ ಬಗ್ಗೆ ಮತದಾನ ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು.
ವಿಟ್ಲದ ಒಕ್ಕೆತ್ತೂರು ಶಾಲೆ, ಮೇಗಿನಪೇಟೆ ಶಾಲೆ, ವಿಟ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ವಿಠಲ ಪದವಿ ಪೂರ್ವ ಕಾಲೇಜು, ಬೊಳಂತಿಮೊಗರು ಸರ್ಕಾರಿ ಪ್ರೌಢ ಶಾಲೆ, ವಿಟ್ಲ ಸರ್ಕಾರಿ ಮಾದರಿ ಶಾಲೆ, ವಿಟ್ಲ ಸೇಂಟ್ ರೀಟಾ ಶಾಲೆಗಳಲ್ಲಿ ಮತದಾರರಿಗೆ ಮಾಹಿತಿ ನೀಡಲಾಯಿತು.
ಸೆಕ್ಟರ್ ಅಧಿಕಾರಿ ಗೋಕಲ್ದಾಸ್ ಅವರು ಮತದಾರರಿಗೆ ಮಾಹಿತಿ ನೀಡಿದರು. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಾಲಿನಿ, ಗ್ರಾಮ ಕರಣಿಕ ಪ್ರಕಾಶ್, ಬಿಎಲ್ಒ ಶಾರದಾ ಇದ್ದರು.
ಮತದಾನ ಜಾಗೃತಿ ಶಿಬಿರ
ಉಪ್ಪಿನಂಗಡಿ: ವಿದ್ಯುನ್ಮಾನ ಮತಯಂತ್ರದ ಬಗ್ಗೆ ಪ್ರಾತಕ್ಷಿಕೆ ಹಾಗೂ ಸ್ವೀಪ್ ಕಾರ್ಯಕ್ರಮದಡಿ ಮತದಾನ ಜಾಗೃತಿ ಶಿಬಿರ ಬುಧವಾರ ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ನಡೆಯಿತು.
ಬಸ್ ನಿಲ್ದಾಣದಲ್ಲಿ ಮಾದರಿ ಮತ ಯಂತ್ರವನ್ನು ಇರಿಸಲಾಗಿ ಸಾರ್ವಜನಿಕರಿಗೆ ಮತ ಹಾಕುವ ಬಗ್ಗೆ ಮತ್ತು ತಮ್ಮ ಮತ ಹಾಕಿರುವ ಚಿತ್ರಕ್ಕೆ ಬಿದ್ದಿದೆಯೇ ಎಂದು ಖಾತ್ರಿ ಪಡಿಸುವ ಬಗ್ಗೆ ತೋರಿಸಲಾಗಿ ಈ ಬಗ್ಗೆಯೂ ಮಾಹಿತಿ ನೀಡಲಾಯಿತು.
ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ, ಚುನಾವಣಾ ಸೆಕ್ಟರ್ ಅಧಿಕಾರಿ ಸಂಧ್ಯಾ, ಉಪ್ಪಿನಂಗಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಮಾಹಿತಿ ನೀಡಿದರು.