ಉನ್ನಾವ್ ಮತ್ತು ಕಠುವಾದಲ್ಲಿ ಬಾಲಕಿಯರ ಮೇಲೆ ನಡೆದಿರುವ ಅತ್ಯಾಚಾರ, ಕೊಲೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಉನ್ನಾವ್ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿ ಶಾಸಕರೇ ಆರೋಪಿ ಸ್ಥಾನದಲ್ಲಿದ್ದು, ವಿರೋಧ ಪಕ್ಷಗಳು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿವೆ. ಕೇರಳದಲ್ಲಿ ಮನೆಗಳ ಮುಂದೆ ‘ಬಿಜೆಪಿಗರಿಗೆ ಪ್ರವೇಶವಿಲ್ಲ, ಇಲ್ಲಿ ಅಪ್ರಾಪ್ತೆಯರು ಇದ್ದಾರೆ. ವೋಟು ಕೇಳಲು ಬರುವವರು ಪ್ರಚಾರ ಪತ್ರಗಳನ್ನು ಗೇಟಿನ ಮುಂದೆಯೇ ಹಾಕಿ ಹೊರಡಿ’ ಎಂದು ಪತ್ರ ಅಂಟಿಸಲಾಗಿದೆ. ಈ ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ.