ಯು.ಪಿ. ವಿಧಾನಸಭೆ ವಿಸರ್ಜನೆ
ನವದೆಹಲಿ, ಏ. 15– ರಾಜ್ಯಾಂಗದ 356ನೇ ವಿಧಿಯ ಪ್ರಕಾರ ರಾಷ್ಟ್ರಪತಿ ಡಾ. ಜಾಕಿರ್ಹುಸೇನರು ಘೋಷಣೆಯನ್ನು ಹೊರಡಿಸಿ ಉತ್ತರ ಪ್ರದೇಶ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.
ಉತ್ತರ ಪ್ರದೇಶದ ವಿಧಾನಸಭೆ ವಿಸರ್ಜಿಸಿ ಹಾಗೂ ಹೊಸ ಚುನಾವಣೆ ನಡೆಸಲು ರಾಜ್ಯಪಾಲ ಶ್ರೀ ಬಿ. ಗೋಪಾಲರೆಡ್ಡಿ ಅವರು ಕಳುಹಿಸಿದ ವರದಿಯನ್ನು ಒಪ್ಪಿಕೊಂಡು ಕೇಂದ್ರ ಸಂಪುಟ ಶಿಫಾರಸು ಮಾಡಿದ ಕೆಲವೇ ಕ್ಷಣಗಳಲ್ಲಿ ರಾಷ್ಟ್ರಪತಿಗಳು ಘೋಷಣೆಗೆ ಸಹಿ ಮಾಡಿದರು.
ಅಕ್ಟೋಬರ್ ಹೊತ್ತಿಗೆ 30 ಲಕ್ಷ ಟನ್ ಮೀಸಲು ಧಾನ್ಯ ದಾಸ್ತಾನು: ಜಗಜೀವನರಾಂ
ನವದೆಹಲಿ, ಏ. 15– ಅಕ್ಟೋಬರ್ ಹೊತ್ತಿಗೆ 30 ಲಕ್ಷ ಟನ್ಗಳಷ್ಟು ಧಾನ್ಯದ ಮೀಸಲು ದಾಸ್ತಾನನ್ನು ನಿರ್ಮಿಸಲಾಗುವುದೆಂದು ಕೇಂದ್ರ ಆಹಾರ ಮಂತ್ರಿ ಶ್ರೀ ಜಗಜೀವನರಾಂ ಅವರು ಇಂದು ಲೋಕಸಭೆಗೆ ತಿಳಿಸಿದರು.
ಈಗಾಗಲೇ 20 ಲಕ್ಷ ಟನ್ಗಳಷ್ಟು ಮೀಸಲು ದಾಸ್ತಾನನ್ನು ನಿರ್ಮಿಸಲಾಗಿದೆಯೆಂದೂ ಅವರು ಹೇಳಿದರು.
ಮೂರು ವರ್ಷಗಳಲ್ಲಿ ಸೀಮೆ ಎಣ್ಣೆಯಲ್ಲಿ ಸ್ವಯಂ ಪೂರ್ಣತೆ
ನವದೆಹಲಿ, ಏ. 15– ಭಾರತವು ಸೀಮೆ ಎಣ್ಣೆಯಲ್ಲಿ ಇನ್ನು ಸುಮಾರು ಮೂರು ವರ್ಷಗಳ ಅವಧಿಯಲ್ಲಿ ಸ್ವಯಂ ಪೂರ್ಣತೆ ಗಳಿಸುವುದೆಂದು ಪೆಟ್ರೋಲಿಯಂ ಶಾಖೆ ಸಚಿವ ಶ್ರೀ ಅಶೋಕ್ ಮೆಹತಾ ಅವರು ಲೋಕಸಭೆಯಲ್ಲಿ ಇಂದು ಪ್ರಶ್ನೋತ್ತರ ಸಮಯದಲ್ಲಿ ತಿಳಿಸಿದರು.
ಗೋವೆಯಲ್ಲೇ ಏ.ಐ.ಸಿ.ಸಿ. ಅಧಿವೇಶನ
ಪಣಜಿ, ಏ. 15– ಏ.ಐ.ಸಿ.ಸಿ.ಯ ಮುಂದಿನ ಅಧಿವೇಶನ ಗೋವೆಯಲ್ಲಿ ನಡೆಸಲು ಕಾರ್ಯ ಸಮಿತಿ ನಿರ್ಧಿರಿಸಿದೆ.