ಮಂಗಳೂರು: ‘ಮಂಗಳೂರು ವಿಧಾ ನಸಭಾ ಕ್ಷೇತ್ರದಲ್ಲಿ ನಾಲ್ಕು ವರ್ಷ ಹತ್ತು ತಿಂಗಳು ಆಗಿರುವ ಅಭಿವೃದ್ಧಿ ಕೆಲಸಗಳ ಕುರಿತು ಚಕಾರ ಎತ್ತದ ವಿರೋಧ ಪಕ್ಷಗಳು ಚುನಾವಣೆಯಲ್ಲಿ ಲಾಭ ಪಡೆಯುವ ಉದ್ದೇಶದಿಂದ ಅಪ ಪ್ರಚಾರಕ್ಕೆ ಇಳಿದಿವೆ’ ಎಂದು ಸ್ಥಳೀಯ ಶಾಸಕರೂ ಆಗಿರುವ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಆರೋಪಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಂಗಳೂರು ಕ್ಷೇತ್ರದಲ್ಲಿ ಈ ಬಾರಿ ಅಭಿವೃದ್ಧಿಯ ಸತ್ಯ ಮತ್ತು ಸುಳ್ಳು ಆರೋಪ, ಅಪಪ್ರಚಾರದ ಹುನ್ನಾರದ ನಡುವೆ ಸ್ಪರ್ಧೆ ನಡೆಯು ತ್ತಿದೆ. ಅಭಿವೃದ್ಧಿ ಕಾಮಗಾರಿಗಳ ಸತ್ಯದ ವಿಚಾರ ಜನರ ಕಣ್ಣೆದುರಿಗೆ ಇದೆ. ಹೀಗಾಗಿ ವಿರೋಧ ಪಕ್ಷಗಳು ಮಾಡುತ್ತಿರುವ ಕುತಂತ್ರಕ್ಕೆ ಜಯ ದೊರಕುವುದಿಲ್ಲ’ ಎಂದರು.
ಶಾಸಕನಾಗಿ ಕೆಲಸ ಮಾಡುವಾಗ ಜಾತಿ, ಧರ್ಮ, ಪಕ್ಷದ ಹೆಸರಿನಲ್ಲಿ ಯಾರಿಗೂ ತಾರತಮ್ಯ ಮಾಡಿಲ್ಲ. ಕಳೆದ ಚುನಾವಣೆಯಲ್ಲಿ ಸೋಲಿಸಲು ಯತ್ನಿಸ ದವರು ಬಂದಾಗಲೂ ಸೌಜನ್ಯದಿಂದ ಅವರಿಗೆ ಸ್ಪಂದಿಸಲಾಗಿದೆ. ಎಲ್ಲ ಧರ್ಮ, ಜಾತಿಯ ಜನರಿಗೆ ಸರ್ಕಾರದ ನೆರವನ್ನು ಒದಗಿಸಲಾಗಿದೆ. ರಸ್ತೆ, ಕುಡಿಯುವ ನೀರು, ವಸತಿ ಸೌಕರ್ಯ, ನಿವೇಶನ ಹಕ್ಕುಪತ್ರ ವಿತರಣೆಯ ಕೆಲಸದಲ್ಲಿ ತಾರತಮ್ಯ ಮಾಡಿಲ್ಲ ಎಂದು ಹೇಳಿದರು.
ವಿರೋಧ ಪಕ್ಷಗಳು ಜಾತಿ, ಧರ್ಮದ ಹೆಸರನ್ನು ಎಳೆದು ತಂದು ಅಪಪ್ರಚಾರ ನಡೆಸುವುದನ್ನು ನಿಲ್ಲಿಸಬೇಕು. ಅಭಿವೃದ್ಧಿ ವಿಚಾರಗಳ ಹೊರತಾಗಿ ಸುಳ್ಳು ಹಬ್ಬಿಸಿ ಚುನಾವಣೆಯಲ್ಲಿ ಲಾಭ ಪಡೆಯಲು ಯತ್ನಿಸಬಾರದು. ಅಭಿವೃದ್ಧಿ ವಿಚಾರಗಳ ಆಧಾರದಲ್ಲಿ ನೇರವಾಗಿ ಚರ್ಚೆಗೆ ಬರಲಿ. ಜನರು ಕೂಡ ಯಾವ ಸಂದರ್ಭದಲ್ಲೂ ವಿರೋಧ ಪಕ್ಷಗಳ ಅಪಪ್ರಚಾರದ ತಂತ್ರಕ್ಕೆ ಮರುಳಾಗಬಾರದು ಎಂದು ಮನವಿ ಮಾಡಿದರು.
‘ನಾನು ಗೆಲ್ಲುವ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ. ನನಗೆ ನನ್ನ ಗೆಲುವಷ್ಟೇ ಮುಖ್ಯ. ನಿರ್ದಿಷ್ಟವಾಗಿ ಯಾರನ್ನಾದರೂ ಸೋಲಿಸಲೇಬೇಕು ಎಂದು ಚುನಾವಣೆಗೆ ಸ್ಪರ್ಧಿಸುತ್ತಿಲ್ಲ’ ಎಂದರು.
ಪೋಕ್ಸೊ ಬಲವರ್ಧನೆಗೆ ಆಗ್ರಹ: ಜಮ್ಮು ಮತ್ತು ಕಾಶ್ಮೀರದ ಕಠುವಾದಲ್ಲಿ ಎಂಟು ವರ್ಷದ ಬಾಲಕಿಯನ್ನು ಅತ್ಯಾಚಾರ ನಡೆಸಿ, ಬರ್ಬರವಾಗಿ ಕೊಲೆ ಮಾಡಿರುವುದು ಖಂಡನೀಯ. ಈ ಘಟನೆಯು ಭಾರತೀಯರು ಜಗತ್ತಿನ ಎದುರು ತಲೆ ತಗ್ಗಿಸುವಂತೆ ಮಾಡಿದೆ. ನಿರ್ಭಯಾ ಪ್ರಕರಣದ ಬಳಿಕ ಪೋಕ್ಸೊ ಕಾಯ್ದೆ ತಂದರೂ, ಅತ್ಯಾಚಾರ ಪ್ರಕರ ಣಗಳ ಸಂಖ್ಯೆ ಏರುತ್ತಲೇ ಇದೆ ಎಂದರು.
‘ಅತ್ಯಾಚಾರ ಆರೋಪಿಗಳಿಗೆ ಇನ್ನಷ್ಟು ಕಠಿಣವಾದ ಶಿಕ್ಷೆ ನೀಡಲು ಪೋಕ್ಸೊ ಕಾಯ್ದೆಗೆ ತಿದ್ದುಪಡಿಗಳನ್ನು ತರಬೇಕು. ಆರೋಪಿಗಳಿಗೆ ವಿಚಾರಣೆ ಮುಗಿಯುವವರೆಗೂ ಜಾಮೀನು ನೀಡ ಬಾರದು. ಕನಿಷ್ಠ ಜೀವಾವಧಿ ಶಿಕ್ಷೆ ಮತ್ತು ಗರಿಷ್ಠವಾಗಿ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸಬೇಕು. ಸಂತ್ರಸ್ತರ ಕುಟುಂಬಗಳಿಗೆ ಪೊಲೀಸ್ ರಕ್ಷಣೆ ಒದಗಿಸುವುದು, ಕಾಲಮಿತಿಯಲ್ಲಿ ವಿಚಾರಣೆ ಪೂರ್ಣಗೊಳಿಸುವುದು ಮತ್ತು ಸಂತ್ರಸ್ತ ಕುಟುಂಬ ಬಯಸಿದ ತಕ್ಷಣ ಖಾಸಗಿ ವಕೀಲರನ್ನು ನೇಮಿಸಿ ಕೊಳ್ಳಲು ಅವಕಾಶ ನೀಡಬೇಕು’ ಎಂದು ಒತ್ತಾಯಿಸಿದರು.
ಮಂಗಳೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮೊಹಮ್ಮದ್ ಮೋನು, ಕಾಂಗ್ರೆಸ್ ಮುಖಂಡರಾದ ರಮೇಶ್ ಶೆಟ್ಟಿ, ಜಬ್ಬಾರ್, ರತ್ನಾಕರ್ ಪತ್ರಿಕಾಗೋಷ್ಠಿಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.