ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೆ ಹಣ್ಣಿಗೆ ಬಂತು ಭಾರಿ ಬೆಲೆ

ಹೊಟ್ಟು ತೆಗೆಯದೇ ಮಾರಾಟ ಮಾಡುತ್ತಿರುವ ರೈತರು
Last Updated 17 ಏಪ್ರಿಲ್ 2018, 9:25 IST
ಅಕ್ಷರ ಗಾತ್ರ

ಶ್ರೀನಿವಾಸಪುರ: ಈಗ ಹುಣಸೆ ಹಣ್ಣಿಗೆ ಭಾರಿ ಬೆಲೆ ಬಂದಿದೆ. ವ್ಯಾಪಾರಿಗಳು ಮಂಡಿಗಳಲ್ಲಿ ಸಂಗ್ರಹಿಸಿದ್ದ ಹುಣಸೆ ಹಣ್ಣನ್ನು  ಮಾರುತ್ತಿದ್ದಾರೆ. ಹುಣಸೆ ಬೆಳೆಗಾರರು ಕಾಯಿಯ ಹೊಟ್ಟು ತೆಗೆಯದೆ ಮಾರಿ ಕಾಸು ಮಾಡಿಕೊಳ್ಳುತ್ತಿದ್ದಾರೆ.

ಮಾವಿನ ಮಡಿಲು ಎಂದು ಕರೆಯಲ್ಪಡುವ ಶ್ರೀನಿವಾಸಪುರ ತಾಲ್ಲೂಕು, ಮಾವಿನ ಹಣ್ಣಿಗೆ ಮಾತ್ರಲ್ಲದೆ ಹುಣಸೆ ಹಣ್ಣಿಗೂ ಪ್ರಸಿದ್ಧಿ ಪಡೆದಿದೆ. ರೈತರು ಹುಣಸೆ ಮರಗಳನ್ನು ವಿಶಾಲವಾದ ತೋಪುಗಳು ಹಾಗೂ ಹೊಲಗಳ ಬದುಗಳಲ್ಲಿ ಬೆಳೆದಿದ್ದಾರೆ. ಹಿಂದೆ ಮಾವಿನ ತೋಟಗಳಲ್ಲಿಯೂ ಹುಣಸೆ ಮರಗಳನ್ನು ಬೆಳೆಯಲಾಗಿತ್ತು. ಆದರೆ ಕಾಲಾಂತರದಲ್ಲಿ ಮಾವಿನ ಬೆಳೆಗೆ ಹೆಚ್ಚಿನ ಮಾನ್ಯತೆ ದೊರೆತು, ಹುಣಸೆ ಮರಗಳನ್ನು ತೆಗೆಯಲಾಯಿತು.

ಮಾರುಕಟ್ಟೆಯಲ್ಲಿ ಒಂದು ಕೆಜಿ ಹುಣಸೆ ಹಣ್ಣಿನ ಬೆಲೆ ಗುಣಮಟ್ಟದ ಆಧಾರದ ಮೇಲೆ ₹ 150 ರಿಂದ 200 ಇದೆ. ಹೊಟ್ಟು ತೆಗೆದು ನಾರು ಬಿಡಿಸದ ಕಾಯಿಗೂ ಲಾಭದಾಯಕ ಬೆಲೆ ಬಂದಿದೆ. ಹಾಗಾಗಿ ಬೆಳೆಗಾರರು ಹಣ್ಣು ಮಾಡುವ ಗೋಜಿಗೆ ಹೋಗದೆ ಮಾರಾಟ ಮಾಡುತ್ತಿದ್ದಾರೆ. ಹುಣಸೆ ಹೊಟ್ಟು ತೆಗೆಯುವ ಕಾರ್ಮಿಕರ ಕೊರತೆಯಿಂದ ಕೆಲವರು ಹೊಟ್ಟು ಸಹಿತ ಮಾರುತ್ತಿದ್ದಾರೆ.

ತಾಲ್ಲೂಕಿನಲ್ಲಿ ಮರವೇರಿ ಹುಣಸೆ ಕಾಯಿ ಕೊಯಿಲು ಮಾಡುವ ಹಾಗೂ ಕಾಯಿ ಸಂಗ್ರಹಿಸುವ ಕಾರ್ಮಿಕರ ಕೊರತೆಯಿಂದ ಹುಣಸೆ ಮರಗಳಲ್ಲಿ ಎಲೆ ಉದುರಿ, ಮತ್ತೆ ಚಿಗುರುತ್ತಿದ್ದರೂ, ಕಾಯಿ ಕೊಯಿಲು ಮುಗಿದಿಲ್ಲ. ಅದಿನ್ನೂ ಆಮೆಗತಿಯಲ್ಲಿ ನಡೆಯುತ್ತಿದೆ. ಸಾಮಾನ್ಯವಾಗಿ ಸುಗ್ಗಿ ಕಾಲದಲ್ಲಿ ಬೆಲೆ ಕಡಿಮೆ ಇರುತ್ತಿತ್ತು. ಈ ಬಾರಿ ಮಾತ್ರ ಅಪರೂಪಕ್ಕೆ ಸುಗ್ಗಿ ಮುಗಿಯುವ ಮೊದಲೇ ಹುಣಸೆ ಹಣ್ಣಿನ ಬೆಲೆ ಗಗನಕ್ಕೇರಿದೆ.

ಕಪ್ಪು ಬಣ್ಣಕ್ಕೆ ತಿರುಗಿರುವ ಹಳೇ ಹುಣಸೆ ಹಣ್ಣಿಗೂ ಬೇಡಿಕೆ ಬಂದಿದೆ. ಈ ಹಿಂದೆ ಮಾರುಕಟ್ಟೆಯಲ್ಲಿ ಬೇಡಿಕೆ ಹೊಂದಿರದ ಹಳೇ ಹುಣಸೆ ಹಣ್ಣು ಕೆಜಿಯೊಂದಕ್ಕೆ ₹ 120 ರಂತೆ ಮಾರಾಟವಾಗುತ್ತಿದೆ. ಕೆಲವರು ಗ್ರಾಮೀಣ ಪ್ರದೇಶದಲ್ಲಿ ಸಂಚರಿಸಿ ಹಳೇ ಹುಣಸೆ ಹಣ್ಣು ಖರೀದಿಸುತ್ತಿದ್ದಾರೆ. ಮನೆ ಖರ್ಚಿಗೆಂದು ಇಟ್ಟುಕೊಂಡ ಹಳೇ ಹಣ್ಣನ್ನು ಮಾರಿ ಕಾಸು ಮಾಡಿಕೊಳ್ಳುತ್ತಿದ್ದಾರೆ.

ತಾಲ್ಲೂಕಿನಲ್ಲಿ ಹುಣಸೆ ಹಣ್ಣನ್ನು ‘ಕಪ್ಪು ಬಂಗಾರ’ ಎಂದು ಕರೆಯುವುದು ರೂಢಿ. ಹುಣಸೆ ಹಣ್ಣು ವ್ಯಾಪಾರಿಗಳಿಗೆ ಸಮಾಜದಲ್ಲಿ ಹೆಚ್ಚಿನ ಮಾನ್ಯತೆ ಇದೆ. ಇಲ್ಲಿ ಹುಣಸೆ ಹಣ್ಣು ವ್ಯಾಪಾರ ಮಾಡುವುದು ಗೌರವದ ಸಂಕೇತ. ಹುಣಸೆ ಕಾಯಿಯಿಂದ ಬೀಜ ತೆಗೆದು, ಮಂಡಿಯಲ್ಲಿ ತುಳಿದು ಕಾಯ್ದಿರಿಸಿ ಮಾರುವುದು ಹಿಂದಿನಿಂದಲೂ ನಡೆದು ಬಂದಿದೆ.

ಈಗ ಇಲ್ಲಿನ ಹಣ್ಣನ್ನು ಪ್ಯಾಕ್‌ ಮಾಡಿ, ಚೆನ್ನೈ ಮಾರುಕಟ್ಟೆಗೆ ಸಾಗಿಸಲಾಗುತ್ತಿದೆ. ಹಣ್ಣಿಗೆ ಅಧಿಕ ಬೇಡಿಕೆ ಬಂದಿರುವುದರಿಂದ, ತಮಿಳು ನಾಡಿನ ಹುಣಸೆ ಹಣ್ಣು ವ್ಯಾಪಾರಿಗಳು ತಾಲ್ಲೂಕಿನಲ್ಲಿ ಸಂಚರಿಸಿ ಸ್ಪರ್ಧಾತ್ಮಕ ಬೆಲೆಯಲ್ಲಿ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ. ಟೊಮೆಟೊ ಬೆಲೆ ಕುಸಿದಿದ್ದರೂ, ಹುಣಸೆ ಹಣ್ಣಿಗೆ ಬೆಲೆ ಬಂದಿರುವುದು ಗಮನಾರ್ಹ ಸಂಗತಿಯಾಗಿದೆ.

**

ಈ ಬಾರಿ ಹುಣಸೆ ಹಣ್ಣು ಒಳ್ಳೆಯ ಬೆಳೆ ಬಂದಿದೆ. ಕಾವಲಿದ್ದು ಕಾಯಿ ಕೊಯಿಲು ಮಾಡಿದ್ದಕ್ಕೆ ಮೋಸವಾಗಿಲ್ಲ. ಮುಂದೆಯೂ ಇದೇ ಬೆಲೆ ಇದ್ದರೆ ಸಾಕು – ಸೊಣ್ಣಪ್ಪರೆಡ್ಡಿ, ಕೃಷಿಕ, ಪನಸಮಾಕನಹಳ್ಳಿ.

**

ವಿವೇಚನಾ ರಹಿತವಾಗಿ ಹುಣಸೆ ಮರಗಳಿಗೆ ಕೊಡಲಿ ಹಾಕಿದ್ದ ರೈತರು, ಈಗ ಹುಣಸೆ ಹಣ್ಣಿಗೆ ಬಂದಿರುವ ಬೆಲೆಯನ್ನು ಕಂಡು ಬಾಯಲ್ಲಿ ನೀರೂರಿಸಿಕೊಳ್ಳುತ್ತಿದ್ದಾರೆ. ಬಾಯಾರಿಕೆಯಾದಾಗ ಬಾವಿ ಅಗೆಯಲು ಸಾಧ್ಯವೇ –ಆನಂದರೆಡ್ಡಿ, ರೈತ, ಕಡಪಲರೆಡ್ಡಿಗಾರಿಪಲ್ಲಿ.

**

–ಆರ್‌.ಚೌಡರೆಡ್ಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT