ಮಹಾತ್ಮ ಗಾಂಧಿ ವಾಚಾಳಿಯಲ್ಲ. ಹೋಗಲಿ, ನೆಹರೂ ಅಥವಾ ನಾವು ಕಂಡಿರುವ ಅಟಲ್ ಬಿಹಾರಿ ವಾಜಪೇಯಿ, ಪಿ.ವಿ. ನರಸಿಂಹರಾವ್ ಅವರಂಥ ಮಾತುಗಾರನೂ ಅಲ್ಲ. ರಾಜಕೀಯದಲ್ಲಂತೂ ಅಂಬೇಡ್ಕರ್, ಇಂದಿರಾ ಗಾಂಧಿ, ವಿ.ಪಿ. ಸಿಂಗ್ ಅಂಥವರಿರಲಿ, ಎಚ್.ಡಿ. ದೇವೇಗೌಡರೊಂದಿಗೂ ಹೋಲಿಸಲಾಗದು. ಇಷ್ಟಕ್ಕೂ ಗಾಂಧೀಜಿ ರಾಜಕೀಯಕ್ಕೆ ಬಂದದ್ದೇ ಆಕಸ್ಮಿಕ. ‘ಶಕ್ತಿ ರಾಜಕಾರಣ’ (ಪವರ್ ಪಾಲಿಟಿಕ್ಸ್) ದಲ್ಲಂತೂ ಅವರು ಎಂದೂ ಭಾಗವಹಿಸಿದ್ದಿಲ್ಲ. ವೈಸರಾಯ್ ಇರ್ವಿನ್ರೊಡನೆ ಮಾಡಿಕೊಂಡ ಒಪ್ಪಂದದ ಕಾರಣಕ್ಕೆ ಅವರು ತಮ್ಮ ನೆಚ್ಚಿನ ಶಿಷ್ಯವರ್ಗದ ಟೀಕೆ ಅಷ್ಟೇ ಅಲ್ಲ, ನಿಂದನೆಗೂ ಗುರಿಯಾಗಿದ್ದರು. ಅದರಿಂದ ಅವರು ನೊಂದುಕೊಂಡರೇ ಹೊರತು, ಮೊಂಡು ವಾದದಿಂದ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳಹೋಗಲಿಲ್ಲ. ಅವರದು ಆದರ್ಶ. ಅದೂ ದೇಶದ ಆಡಳಿತ ನಡೆಸಲು ಸಾಧ್ಯವಾಗಲಾರದಂತಹ ಎತ್ತರದ ಆದರ್ಶ.