ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರದ ಪರಿಸ್ಥಿತಿಯೂ ಹನೂರು ಕ್ಷೇತ್ರವನ್ನೇ ಹೋಲುತ್ತದೆ. ಹನೂರಿನಲ್ಲಿ ಬಿಜೆಪಿ ತನ್ನ ಅಭ್ಯರ್ಥಿಯನ್ನು ಬದಲಿಸಿದ್ದರೆ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿ ಬದಲಿಸಿದೆ. ಹನೂರಿನಲ್ಲಿ ಬಿಜೆಪಿ ಹೊಸಬರಿಗೆ ಟಿಕೆಟ್ ನೀಡಿದ್ದರೆ, ಕೊಳ್ಳೇಗಾಲದಲ್ಲಿ ಕಾಂಗ್ರೆಸ್ ಹಳಬರಿಗೆ ಟಿಕೆಟ್ ನೀಡಿದೆ. ಹಾಲಿ ಶಾಸಕ ಎಸ್.ಜಯಣ್ಣ ಅವರ ಬದಲಿಗೆ ಎ.ಆರ್.ಕೃಷ್ಣಮೂರ್ತಿ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ನಾಂದಿ ಹಾಡಿದೆ. ಆದರೆ, ಬಿಜೆಪಿ ತನ್ನ ಹಳೆಯ ಅಭ್ಯರ್ಥಿ ಜಿ.ಎನ್.ನಂಜುಂಡಸ್ವಾಮಿ ಹಾಗೂ ಬಿಎಸ್ಪಿ ಎನ್.ಮಹೇಶ್ ಅವರಿಗೆ ಮತ್ತೆ ಟಿಕೆಟ್ ನೀಡಿವೆ.