ಬೆಂಗಳೂರು: ಕಾಡುಗೋಡಿ ಬಳಿಯ ಚನ್ನಸಂದ್ರದಲ್ಲಿ ವೆಂಕಟೇಶ್ (29) ಎಂಬುವರನ್ನು ಕೊಲೆ ಮಾಡಿದ್ದ ಆರೋಪದಡಿ, ಅವರ ಪತ್ನಿ ನಾಗಮ್ಮ (27) ಹಾಗೂ ಆಕೆಯ ಗೆಳೆಯ ಶ್ರೀನಿವಾಸ್ನನ್ನು (29) ಪೊಲೀಸರು ಬಂಧಿಸಿದ್ದಾರೆ.
ಶ್ರೀನಿವಾಸಪುರದ ವೆಂಕಟೇಶ್ ಹಾಗೂ ನಾಗಮ್ಮ, ಸ್ಥಳೀಯ ಕಂಪನಿಯೊಂದರಲ್ಲಿ ಸ್ವಚ್ಛತೆ ನಿರ್ವಹಣೆ ಕೆಲಸ ಮಾಡುತ್ತಿದ್ದರು. ಎ.ಕೆ.ಜಿ ಕಾಲೊನಿಯ 1ನೇ ಅಡ್ಡರಸ್ತೆಯಲ್ಲಿ ವಾಸವಿದ್ದರು. ಮಂಗಳವಾರ (ಏ. 17) ರಾತ್ರಿ ವೆಂಕಟೇಶ್ರ ಕೈ ಕಾಲುಗಳನ್ನು ಕಟ್ಟಿ ಹಾಕಿದ್ದ ಆರೋಪಿಗಳು, ದಿಂಬಿನಿಂದ ಮುಖ ಮುಚ್ಚಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದರು.
ಶ್ರೀನಿವಾಸಪುರದವನೇ ಆದ ಆರೋಪಿ ಶ್ರೀನಿವಾಸ್, ಕೆಎಸ್ಆರ್ಟಿಸಿ ಬಸ್ ಚಾಲಕ. ಕೆ.ಜಿ.ಎಫ್ ಡಿಪೊದಲ್ಲಿ ಕೆಲಸ ಮಾಡುತ್ತಿದ್ದ. ಈ ಆರೋಪಿ ಹಾಗೂ ಮೃತರು, ಒಂದೇ ತಾಲ್ಲೂಕಿನವರಾಗಿದ್ದರಿಂದ ಪರಸ್ಪರ ಪರಿಚಯವಿತ್ತು. ಆಗಾಗ ಮನೆಗೂ ಬಂದು ಹೋಗುತ್ತಿದ್ದ ಆರೋಪಿ, ಪತ್ನಿಯ ಪರಿಚಯ ಮಾಡಿಕೊಂಡಿದ್ದ. ನಂತರ, ಅವರಿಬ್ಬರ ನಡುವೆ ಸ್ನೇಹ ಏರ್ಪಟ್ಟು ಸಲುಗೆ ಬೆಳೆದಿತ್ತು.
ಈ ವಿಷಯ ತಿಳಿಯುತ್ತಿದ್ದಂತೆ ವೆಂಕಟೇಶ್, ಪತ್ನಿಗೆ ಎಚ್ಚರಿಕೆ ನೀಡಿದ್ದರು. ಅದೇ ವಿಷಯವಾಗಿ ಮನೆಯಲ್ಲಿ ಗಲಾಟೆ ನಡೆಯುತ್ತಿತ್ತು. ಕುಟುಂಬದವರು ಪಂಚಾಯ್ತಿ ಕರೆದು ಪತ್ನಿಗೆ ಬುದ್ಧಿವಾದ ಹೇಳಿದ್ದರು. ಅದಾದ ನಂತರವೂ ಆಕೆ, ಸಲುಗೆ ಮುಂದುವರಿಸಿದ್ದಳು ಎಂದರು.
‘ಬುಧವಾರ ರಾತ್ರಿ ಗೆಳೆಯನನ್ನು ನಾಗಮ್ಮ ಮನೆಗೆ ಕರೆಸಿಕೊಂಡಿದ್ದಳು. ಅದೇ ವೇಳೆ ಮನೆಗೆ ಬಂದಿದ್ದ ಪತಿ, ಇಬ್ಬರನ್ನೂ ಕಂಡು ಗಲಾಟೆ ಮಾಡಿದ್ದರು. ಆಗ, ಅವರಿಬ್ಬರು ಸೇರಿ ವೆಂಕಟೇಶ್ ಅವರನ್ನು ಕೊಂದಿದ್ದರು. ರಾತ್ರಿಯೇ ಶ್ರೀನಿವಾಸ್, ಮನೆಯಿಂದ ಹೊರಟು ಹೋಗಿದ್ದ’.
‘ಪತಿ ತೀರಿಕೊಂಡಿರುವುದಾಗಿ ಹೇಳಿ ಬೆಳಿಗ್ಗೆ ಜನರನ್ನು ಸೇರಿಸಿದ್ದ ನಾಗಮ್ಮ, ಅಸ್ವಭಾವಿಕ ಸಾವು ಎಂದು ಬಿಂಬಿಸಲು ಯತ್ನಿಸಿದ್ದಳು. ಸಾವಿನಲ್ಲಿ ಅನುಮಾನ ವ್ಯಕ್ತಪಡಿಸಿದ್ದ ವೆಂಕಟೇಶ್ರ ತಮ್ಮ ಮಂಜುನಾಥ್, ಠಾಣೆಗೆ ದೂರು ನೀಡಿದ್ದರು. ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಕೊಲೆ ವಿಷಯ ಗೊತ್ತಾಯಿತು. ನಂತರವೇ ಶ್ರೀನಿವಾಸ್ನನ್ನು ಬಂಧಿಸಿದೆವು’ ಎಂದು ಪೊಲೀಸರು ಮಾಹಿತಿ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.