ಹೈದರಾಬಾದ್: ಮೆಕ್ಕಾ ಮಸೀದಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ತೀರ್ಪು ನೀಡಿದ್ದ ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಕೆ.ರವೀಂದ್ರ ರೆಡ್ಡಿ ಅವರ ರಾಜೀನಾಮೆಯನ್ನು ಹೈದರಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.
ಸೋಮವಾರ ಪ್ರಕರಣದ ತೀರ್ಪು ಘೋಷಿಸಿದ ಕೆಲವೇ ತಾಸುಗಳಲ್ಲಿ ಕೆ.ರವೀಂದ್ರ ರೆಡ್ಡಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಜತೆಗೆ 15 ದಿನ ರಜೆಗೂ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ರಾಜೀನಾಮೆ ತಿರಸ್ಕರಿಸಿ, ರಜೆ ರದ್ದುಪಡಿಸಿದ್ದರಿಂದ ಗುರುವಾರದಿಂದ ಅವರು ಕರ್ತವ್ಯಕ್ಕೆ ಮರಳಿದ್ದಾರೆ.
ಹೈಕೋರ್ಟ್ ನಿರ್ಣಯಕ್ಕೆ ಕಾರಣ ಏನು ಎಂಬುದ ತಕ್ಷಣ ತಿಳಿದುಬಂದಿಲ್ಲ. ರವೀಂದ್ರ ರೆಡ್ಡಿ ವಿರುದ್ಧದ ಭ್ರಷ್ಟಾಚಾರ ಆರೋಪ ಕುರಿತು ತನಿಖೆ ನಡೆಸಬೇಕು ಎಂದು ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಇನ್ನೂ ಬಾಕಿ ಇರುವುದರಿಂದ ರಾಜೀನಾಮೆ ತಿರಸ್ಕರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ರವೀಂದ್ರ ರೆಡ್ಡಿ ರಾಜೀನಾಮೆಗೆ ‘ವೈಯಕ್ತಿಕ ಕಾರಣ’ ನೀಡಿದ್ದರು ಎನ್ನಲಾಗಿದೆ. ಆದರೆ ಮೆಕ್ಕಾ ಪ್ರಕರಣದ ತೀರ್ಪು ನೀಡುವ ಮೊದಲು ಅವರ ಮೇಲೆ ತೀವ್ರ ಒತ್ತಡ ಇತ್ತು ಎಂದು ಅವರ ಸಹೋದ್ಯೋಗಿಗಳು ಹೇಳಿದ್ದಾರೆ.