ಸಮಾಜಮುಖಿ ಸಿನಿಮಾಗಳಿಂದಲೇ ಹೆಚ್ಚು ಸುದ್ದಿಯಾಗುವ ಅಕ್ಷಯ್ ಕುಮಾರ್, ‘ಕೇಸರಿ’ ಸಿನಿಮಾದ ಚಿತ್ರೀಕರಣದ ವೇಳೆ ಗಾಯಗೊಂಡಿದ್ದರು. ಆದರೆ ಚಿಕಿತ್ಸೆಗಾಗಿ ಮುಂಬೈಗೆ ವಾಪಸಾಗಲು ಒಪ್ಪದ ಅಕ್ಕಿ ಬುಧವಾರ ಅಷ್ಟಿಷ್ಟು ವಿಶ್ರಾಂತಿ ಪಡೆಯುತ್ತಲೇ ಚಿತ್ರೀಕರಣಕ್ಕೆ ಮರಳುತ್ತಿದ್ದಾರೆ.
ಮಹಾರಾಷ್ಟ್ರದ ಸಟಾರಾ ಬಳಿಯ ವಾಯ್ ಎಂಬಲ್ಲಿ ‘ಕೇಸರಿ’ ಚಿತ್ರೀಕರಣ ಭರದಿಂದ ಸಾಗಿದೆ. ತಮ್ಮ ಗಾಯದ ಸಮಸ್ಯೆ ಚಿತ್ರೀಕರಣಕ್ಕೆ ತೊಡಕಾಗಬಾರದು ಎಂಬ ಉದ್ದೇಶದಿಂದ ಅಕ್ಕಿ ಚಿಕಿತ್ಸೆಯನ್ನೂ ನಿರಾಕರಿಸುತ್ತಿದ್ದಾರೆ. ಅಕ್ಕಿ ಅವರನ್ನು ಮುಂಬೈಗೆ ಕರೆತರಲು ಬುಧವಾರವೇ ಹೆಲಿಕಾಪ್ಟರ್ ತರಿಸಲಾಗಿದ್ದರೂ ಅಲ್ಪಸ್ವಲ್ಪ ವಿಶ್ರಾಂತಿ ಪಡೆದು ಚಿತ್ರೀಕರಣದಲ್ಲಿ ತೊಡಗಿಸಿಕೊಳ್ಳುವುದು ಮತ್ತೆ ಸ್ವಲ್ಪ ವಿಶ್ರಾಂತಿ...ಹೀಗೆ ಸಾಗಿದೆ ಅವರ ದಿನಚರಿ.
1897ರ ಸಾರಘರಿಯಲ್ಲಿ ಬ್ರಿಟಿಷ್ ಇಂಡಿಯನ್ ಯೋಧರು ಮತ್ತು ಅಫ್ಘಾನಿಸ್ತಾನದ ಬುಡಕಟ್ಟು ಜನಾಂಗದ ನಡುವೆ ನಡೆದಿದ್ದ ಕದನದ ಕತೆಯನ್ನು ‘ಕೇಸರಿ’ ಹೊಂದಿದೆ. ಮುಂದಿನ ವರ್ಷ ಹೋಳಿ ಹಬ್ಬದ ಹೊತ್ತಿಗೆ ಚಿತ್ರ ಬಿಡುಗಡೆಯಾಗುವ ನಿರೀಕ್ಷೆಯಿದೆ.