ಪಟ್ನಾ: ಗಯಾದಿಂದ ಪಟ್ನಾಕ್ಕೆ ಅಧಿಕಾರಿಗಳೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ನ್ಯಾಯಧೀಶರೊಬ್ಬರ ಮೇಲೆ ಹಲ್ಲೆ ನಡೆಸಲಾಗಿದೆ.
ಪುರಿಯ ಸೀತಾಮಾರಿ ಕೋರ್ಟ್ಗೆ ಹೆಚ್ಚುವರಿ ಮುಖ್ಯ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಆಗಿ ವರ್ಗಾವಣೆಯಾಗಿರುವ ಪ್ರಶಾಂತ್ಕುಮಾರ್ ಅವರು ಖಾಸಗಿ ಕೆಲಸದ ನಿಮಿತ್ತ ಗಯಾದಿಂದ ರಾಜಧಾನಿಗೆ ಸಂಚರಿಸುತ್ತಿದ್ದಾಗ ಈ ಪ್ರಕರಣ ನಡೆದಿದೆ.
ಸೀಟಿನ ವಿಷಯವಾಗಿ ಅಧಿಕಾರಿಗಳು ಹಾಗೂ ಅಪರಿಚಿತರೊಂದಿಗೆ ತೀವ್ರ ವಾಗ್ವಾದ ನಡೆದಿದೆ. ಈ ಸಂದರ್ಭದಲ್ಲಿ ತಮಗೆ ನಿಗದಿಯಾಗಿದ್ದ ಸೀಟಿನಲ್ಲಿ ಕೂರಲು ಪ್ರಶಾಂತ್ಕುಮಾರ್ ಯತ್ನಿಸಿದಾಗ ಅಪರಿಚಿತರು ಕೂಗಿದರು. ಮುಂದಿನ ನಿಲ್ದಾಣದಲ್ಲಿ ಗ್ರಾಮಸ್ಥರನ್ನು ಕರೆದ ಅಪರಿಚಿತರು ನ್ಯಾಯಧೀಶರ ಮೇಲೆ ಹಲ್ಲೆ ನಡೆಸಿದರು.
ಕೆಲ ಪ್ರಯಾಣಿಕರು ನ್ಯಾಯಾಧೀಶರನ್ನು ರಕ್ಷಿಸಿದರು. ಆ ವೇಳೆಗಾಗಲೇ ಅವರ ಮೂಗಿನಲ್ಲಿ ರಕ್ತ ಸುರಿಯುತ್ತಿತ್ತು. ಜೆಹನಾಬಾದ್ ನಿಲ್ದಾಣದಲ್ಲಿ ಇಳಿದ ಬಳಿಕ ಅವರು ದೂರು ನೀಡಿದರು.
ಈ ಕುರಿತು ಮಾತನಾಡಿದ ರೈಲ್ವೆ ಸೂಪರಿಂಟೆಂಡೆಂಟ್ ಆಶೋಕ್ಕುಮಾರ್ ಸಿಂಗ್, ನ್ಯಾಯಾಧೀಶರ ಮೇಲೆ ಹಲ್ಲೆ ನಡೆಸಿದ ಜೆಹನಾಬಾದ್ನ ಶಶಾಂಕ್ ಶೇಖರ್ ಹಾಗೂ ಸೂರಜ್ಕುಮಾರ್ ಅವರನ್ನು ಬಂಧಿಸಲಾಗಿದೆ. 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದಿದ್ದಾರೆ.