ಬೈಲಹೊಂಗಲ: ಬಿಜೆಪಿ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿರುವ ಜಗದೀಶ ಮೆಟಗುಡ್ಡ ಸಾವಿರಾರು ಬೆಂಬಲಿಗರ ಜತೆ
ಗೂಡಿ ಮೆರವಣಿಗೆ ನಡೆಸಿ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾಧಿಕಾರಿ ಕೆ.ಸಿ.ದೊರೆಸ್ವಾಮಿ ಅವರಿಗೆ ಗುರುವಾರ ನಾಮಪತ್ರ ಸಲ್ಲಿಸಿದರು.
ನಾಮಪತ್ರ ಸಲ್ಲಿಸುವ ಮುನ್ನ ಅವರು ಪಟ್ಟಣದ ಮರಡಿ ಬಸವೇಶ್ವರ ದೇವಸ್ಥಾನ ಸೇರಿ ಪ್ರಮುಖ ದೇವಸ್ಥಾನಗಳಿಗೆ ತೆರಳಿ ಅವರು ಪೂಜೆ ಸಲ್ಲಿಸಿದರು. ಮರಡಿ ಬಸವೇಶ್ವರ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಮೇದಾರ ಗಲ್ಲಿ, ಬೆಲ್ಲದ ಕೂಟ, ಗೊಂಬಿಗುಡಿ, ಜವಳಿಕೂಟ, ಬಜಾರ ರಸ್ತೆ ಮಾರ್ಗವಾಗಿ ರಾಯಣ್ಣ ವೃತ್ತ ತಲುಪಿತು.
ಬಜಾರ ರಸ್ತೆಯಲ್ಲಿ ಅಭಿಮಾನಿಗಳು ಮೆಟಗುಡ್ಡ ಮೇಲೆ ಪುಷ್ಪ ವೃಷ್ಟಿ ಮಾಡಿದರು. ಡೊಳ್ಳು ಕುಣಿತ, ಜಾಂಜ್ ಮೇಳ ಮೆರವಣಿಯ ಕಳೆ ಹೆಚ್ಚಿಸಿದವು. ಜನರಿಗೆ ಬಾಳೆಹಣ್ಣು, ಶರಬತ್ತು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು.
ಮುಖಂಡರಾದ ಮಹಾಂತೇಶ ತುರಮರಿ, ಬಾಬು ಹರಕುಣಿ, ಮುರಳೀಧರ ಮಾಳೋದೆ, ಬಿ.ಎಂ.ಚಿಕ್ಕನಗೌಡರ, ನಿವೃತ್ತ ಪ್ರೊ.ಸಿ.ವಿ.ಜ್ಯೋತಿ, ವಿಜಯ ಮೆಟಗುಡ್ಡ, ಜಯರಾಜ ಮೆಟಗುಡ್ಡ, ಗುರು ಮೆಟಗುಡ್ಡ, ಡಾ.ಎ.ಎನ್.ಬಾಳಿ ಈ ಸಂದರ್ಭದಲ್ಲಿ ಇದ್ದರು.