ಬೆಳಗಾವಿ: ಇಲ್ಲಿನ ಉತ್ತರ ಹಾಗೂ ದಕ್ಷಿಣ ಮತಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಮುಖಂಡರ ಬೆಂಬಲಿಗರು ಎನ್ನಲಾದ ಪಕ್ಷದ ಕಾರ್ಯಕರ್ತರು ನಗರದಲ್ಲಿ ಗುರುವಾರ ಸಂಜೆ ಪ್ರತ್ಯೇಕವಾಗಿ ಪ್ರತಿಭಟನೆ ನಡೆಸಿದರು. ಸಂಸದ ಸುರೇಶ ಅಂಗಡಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
‘ದಕ್ಷಿಣದಿಂದ ಅಭಯ ಪಾಟೀಲ, ಪಾಂಡುರಂಗ ಧೋತ್ರೆ, ಸುನಿಲ್ ಚೌಗುಲೆ, ಉತ್ತರದಿಂದ ಅನಿಲ ಬೆನಕೆ, ಕಿರಣ ಜಾಧವ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಿದ್ದರು. ಈ ಕ್ಷೇತ್ರಗಳಿಗೆ ಅಧಿಕೃತವಾಗಿ ಟಿಕೆಟ್ ಘೋಷಣೆಯಾಗಿಲ್ಲ. ಈ ನಡುವೆ, ದಕ್ಷಿಣದಿಂದ ಅಭಯ ಪಾಟೀಲ ಹಾಗೂ ಉತ್ತರದಿಂದ ಅನಿಲ ಬೆನಕೆ ತಮಗೆ ಟಿಕೆಟ್ ದೊರೆತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಫೋಟೊಗಳನ್ನು ಪ್ರಕಟಿಸಿದ್ದಾರೆ. ಯಾರಿಗೆ ಟಿಕೆಟ್ ಕೊಡಲಾಗಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
ಗೋವಾವೇಸ್ ಬಳಿ ಸಂಸದರ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು, ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ವಿರುದ್ಧವೂ ಘೋಷಣೆ ಕೂಗಿದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ನಮ್ಮ ಮುಖಂಡರಿಗೆ ಟಿಕೆಟ್ ಕೊಡಬೇಕು ಎಂದು ಆಗ್ರಹಿಸಿದರು.