ಗದಗ: ‘ಮಠಗಳು ಕೇವಲ ಧಾರ್ಮಿಕ ಆಚರಣೆಗಳಿಗೆ ಮಾತ್ರ ಸೀಮಿತವಾಗದೆ, ಪುಸ್ತಕೋತ್ಸವಗಳಂತಹ ಸಮಾಜಮುಖಿ ಕಾರ್ಯಗಳನ್ನು ಕೈಕೊಳ್ಳುವ ಮೂಲಕ ಜ್ಞಾನ ದಾಸೋಹದ ಕೇಂದ್ರಗಳಾಗಬೇಕು’ ಎಂದು ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಮಠದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಎಂ.ಎಂ.ಕಲಬುರ್ಗಿ ಸಾಹಿತ್ಯ ಸಂಕೀರ್ಣ ರತ್ನಮಾಲೆಯಲ್ಲಿ ಡಾ.ಪಿ.ಬಿ.ದೇಸಾಯಿ ಅವರು ರಚಿಸಿದ ‘ಬಸವೇಶ್ವರ ಆಂಡ್ ಹಿಸ್ ಟೈಮ್ಸ್’ ಗ್ರಂಥದ ದ್ವಿತೀಯ ಆವೃತ್ತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಬಸವೇಶ್ವರ ಆಂಡ್ ಹಿಸ್ ಟೈಮ್ಸ್’ ಗ್ರಂಥದ ಕುರಿತು ಧಾರವಾಡದ ಹಿರಿಯ ಸಾಹಿತಿ ಸಿದ್ಧಲಿಂಗ ಪಟ್ಟಣಶೆಟ್ಟಿ ಮಾತನಾಡಿ, ‘ಪಿ.ಬಿ.ದೇಸಾಯಿ ಅವರ ಪಾಂಡಿತ್ಯ ಹಾಗೂ ಅಧ್ಯಯನಶೀಲತೆಯ ಪರಿಣಾಮವಾಗಿ ಈ ಗ್ರಂಥವು ಅತ್ಯಂತ ಪರಿಣಾಮಕಾರಿಯಾಗಿ ಮೂಡಿ ಬಂದಿದೆ, ಈ ಕೃತಿಯನ್ನು ಕನ್ನಡ ಭಾಷೆಗೆ ಅನುವಾದಿಸಿ ನಾಡಿಗೆ ಪರಿಚಯಿಸಿದ ಕೀರ್ತಿ ತೋಂಟದಾರ್ಯ ಮಠಕ್ಕೆ ಸಲ್ಲುತ್ತದೆ. ಪಂಚಪೀಠಗಳು 16ನೇ ಶತಮಾನದಲ್ಲಿ ವಿಜಯನಗರ ಕಾಲದಲ್ಲಿ ಉದಯಿಸಿವೆ ಎಂದು ಈ ಗ್ರಂಥದಲ್ಲಿ ದೇಸಾಯಿ ಅವರು ಉಲ್ಲೇಖಿಸಿರುವುದು ಗಮನಾರ್ಹ ಸಂಗತಿ’ ಎಂದು ತಿಳಿಸಿದರು.
ಲಕ್ಷ್ಮೇಶ್ವರದ ದೊಡ್ಡಬಸಪ್ಪ ಬಸಟ್ಟೆಪ್ಪ ತಟ್ಟಿ ಅವರ ಕುರಿತ ‘ಸಾರ್ಥಕ ಬದುಕು’ ಗ್ರಂಥ ಲೋಕಾರ್ಪಣೆಗೊಳಿಸಲಾಯಿತು. ಗ್ರಂಥ ಸಂಪಾದಕ ಪೂರ್ಣಾಜಿ ಖರಾಟೆ ಮಾತನಾಡಿದರು.
ಶಿರಸಿಯ ನಿವೃತ್ತ ಪ್ರಾಧ್ಯಾಪಕ ಪಿ.ಎಂ.ಹೆಗಡೆ, ಧಾರವಾಡದ ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಶಸ್ತ್ರಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಮಲ್ಲಿಕಾರ್ಜುನ ದೇಸಾಯಿ ಮಾತನಾಡಿದರು.
ದೊಡ್ಡಬಸಪ್ಪ ತಟ್ಟಿ ದಂಪತಿಗೆ ಸನ್ಮಾನಿಸಲಾಯಿತು. ಎಸ್.ಡಿ.ಎಂ. ಕಾಲೇಜಿನ ಪ್ರಸೂತಿ ವಿಭಾಗದ ಮುಖ್ಯಸ್ಥ ಡಾ.ರತ್ನಮಾಲಾ ದೇಸಾಯಿ, ಪ್ರೇಮಕ್ಕ ಕೋನರಡ್ಡಿ, ರೇವಣಸಿದ್ಧಯ್ಯ ಮರಿದೇವರಮಠ ಅವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಿತು.
ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷ ಶೇಖಣ್ಣ ಕವಳಿಕಾಯಿ, ಉಪಾಧ್ಯಕ್ಷ ಗುರುಪಾದಪ್ಪ ಕಟ್ಟಿಮನಿ, ಅನ್ನಪೂರ್ಣಕ್ಕ ಬಡಿಗಣ್ಣವರ ಕಾರ್ಯ ದರ್ಶಿ ಶಿವಕುಮಾರ ರಾಮನಕೊಪ್ಪ, ಸಹ-ಕಾರ್ಯದರ್ಶಿ ಉಮಾಪತಿ ಭೂಸ ನೂರಮಠ, ಸಂಘಟನಾ ಕಾರ್ಯದರ್ಶಿ ಶರಣಬಸಪ್ಪ ಅಂಗಡಿ, ಕೋಶಾಧ್ಯಕ್ಷ ಮಂಜುನಾಥ ಅಸುಂಡಿ ಇದ್ದರು.
ವಿವೇಕಾನಂದ ಗೌಡ ಪಾಟೀಲ ಸ್ವಾಗತಿಸಿದರು. ಬಾಹುಬಲಿ ಜೈನರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
**
ಕಾಯಕದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು, ಅರ್ಪಣಾ ಮನೋಭಾವದಿಂದ ಕಾರ್ಯತತ್ಪರರಾದರೆ ಮಾತ್ರ ಶ್ರೇಷ್ಠ ಸಾಧನೆ ಮಾಡಲು ಸಾಧ್ಯ – ಸಿದ್ಧಲಿಂಗ ಸ್ವಾಮೀಜಿ, ತೋಂಟದಾರ್ಯ ಮಠ.