ಹುಣಸಗಿ: ‘ ಕಳೆದ ಐದು ವರ್ಷದ ಅವಧಿಯಲ್ಲಿ ಬೈಲಾಪುರ ತಾಂಡಾ ಒಂದರಲ್ಲಿಯೇ ₹1 ಕೋಟಿಗೂ ಅಧಿಕ ಮೊತ್ತದ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ’ ಎಂದು ಶಾಸಕ ರಾಜಾ ವೆಂಕಟಪ್ಪನಾಯಕ ತಿಳಿಸಿದರು.
ಬುಧವಾರ ಹುಣಸಗಿ ಸಮೀಪದ ಬೈಲಾಪುರ ತಾಂಡಾದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ಐದು ವರ್ಷದ ಅವಧಿಯಲ್ಲಿ ಎಲ್ಲ ತಾಂಡಾಗಳ ಅಭಿವೃದ್ಧಿಗಾಗಿ ಒತ್ತು ನೀಡಿದ್ದರ ಫಲವಾಗಿ ಎಲ್ಲ ತಾಂಡಾ ಗಳಲ್ಲಿಯೂ ತಮಗೆ ಭಾರಿ ಬೆಂಬಲ ವ್ಯಕ್ತವಾಗು ತ್ತಿದೆ. ಅಭಿವೃದ್ಧಿಯನ್ನು ಜನರು ಮರೆತಿಲ್ಲ ಎನ್ನುವುದು ಇದ ರಿಂದ ಗೊತ್ತಾಗುತ್ತಿದೆ’ ಎಂದರು.
ಜಿಲ್ಲಾ ಪಂಚಾಯಿತಿ ಸದಸ್ಯ ರಾಜಶೇಖರಗೌಡ ಪಾಟೀಲ ವಜ್ಜಲ ಮಾತನಾಡಿ, ‘ರಾಜಾ ವೆಂಕಟಪ್ಪನಾಯಕ ಅವರು ಸೌಮ್ಯ ಸ್ವಭಾವದವರಾಗಿದ್ದು, ಕ್ಷೇತ್ರದ ಜನರ ಆಶೊತ್ತರಗಳಿಗೆ ಸ್ಪಂದಿಸಿದ್ದಾರೆ. ಆದ್ದರಿಂದ ಮತ್ತೊಮ್ಮೆ ಅವರಿಗೆ ಎಲ್ಲರೂ ಆಶಿರ್ವದಿಸಬೇಕು’ ಎಂದು ಮನವಿ ಮಾಡಿದರು.
ಹಿರಿಯ ಮುಖಂಡರಾದ ವೇಂಕೋಬ ಯಾದವ, ನಿಂಗರಾಜ ಬಾಚಿಮಟ್ಟಿ, ತಾಲ್ಲೂಕು ಪಂಚಾಯಿತಿ ಸದಸ್ಯ ತಿರುಪತಿ ಚವ್ವಾಣ, ಪೋಮಾ ನಾಯಕ, ತಾರಾನಾಥ ಚವ್ವಾಣ, ಭೀಮು ಪೂಜಾರಿ, ಅನೀಲಕುಮಾರ ಸೇರಿದಂತೆ ತಾಂಡಾದ ಮುಖಂಡರು, ಮಹಿಳೆಯರು ಇದ್ದರು.