ಚಿತ್ರದುರ್ಗ: ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿ ಹಿರಿಯೂರಿನಿಂದ ಚಿತ್ರದುರ್ಗ ವ್ಯಾಪ್ತಿಯಲ್ಲಿ, ಹೆದ್ದಾರಿ ಪೊಲೀಸರೇ ಗುರುತಿಸಿರುವಂತೆ ಬುರುಜಿನರೊಪ್ಪ ದೇವಸ್ಥಾನ, ಬೂತಪ್ಪನಗುಡಿ (ಗುಯಿಲಾಳು ಚೆಕ್ ಪೋಸ್ಟ್) ಹಾಗೂ ಗಿಡ್ಡೋಬನಹಳ್ಳಿ ಅಪಘಾತವಲಯಗಳಿವೆ. ಅಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿವೆ.
ಪಾಲವ್ವನಹಳ್ಳದ ಬಳಿ ಬುಧವಾರ ಬೆಳಗಿನ ಜಾವ ಮತ್ತೊಂದು ಅಪಘಾತ ಸಂಭವಿಸಿತು. ಮೋಟರ್ ಬೈಕ್ನಲ್ಲಿ ಇಪ್ಪತ್ತೆರಡು ಗಂಟೆಗಳಲ್ಲಿ ಸಾವಿರದ ಐನೂರು ಕಿ.ಮೀ ದೂರ ಪೂರೈಸುವ ಸವಾಲಿನ ಬೆನ್ನುಹತ್ತಿದ ಕೇರಳದ ಪಾಲಕ್ಕಾಡ್ ಸಮೀಪದ ಪಾಂಬಡಿ ಜಿಲ್ಲೆಯ ಅಂತಿಮ ಪದವಿ ವಿದ್ಯಾರ್ಥಿ ಮಿಥುನ್ ಘೋಷ್ (21) ಮೃತರು.
‘ಮಿಥುನ್ಗೆ ವೇಗವಾಗಿ ಬೈಕ್ ಓಡಿಸುವ ಹವ್ಯಾಸವಿತ್ತು. ಈ ಹಿನ್ನೆಲೆಯಲ್ಲಿ 22 ಗಂಟೆಗಳಲ್ಲಿ 1500 ಕಿ.ಮೀ ಕ್ರಮಿಸುವ ಸವಾಲನ್ನು ಸ್ವೀಕರಿಸಿದ್ದ. ಅಮೆರಿಕ ಮೂಲದ ಕಂಪನಿಯೊಂದು ಇಂಥ ಸ್ಪರ್ಧೆಯನ್ನು ಆಯೋಜಿಸಿತ್ತು. ಮಂಗಳವಾರ ಬೈಕ್ನಲ್ಲಿ ಊರು ಬಿಟ್ಟಿದ್ದ ಮಿಥುನ್, ಹೊರಡುವ ಮುನ್ನ ತನ್ನ ತಾಯಿಗೆ ಕೊಯಮತ್ತೂರಿಗೆ ಹೋಗಿ ಬರುವುದಾಗಿ ತಿಳಿಸಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.