ಬೆಂಗಳೂರು: ‘ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲು ನಿರ್ಧರಿಸುವ ಮೂಲಕ ಸಿದ್ದರಾಮಯ್ಯ ಅವರು, ಸಮಾಜವಾದದ ಆದರ್ಶಗಳಿಗೆ ತಿಲಾಂಜಲಿ ಹಾಡಿ, ಅವಕಾಶವಾದಿ ರಾಜಕಾರಣಕ್ಕೆ ಇಳಿದಿದ್ದಾರೆ‘ ಎಂದು ಕೇಂದ್ರ ಸಚಿವ ಅನಂತಕುಮಾರ್ ಟೀಕಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ಸಿದ್ಧಾಂತದಿಂದ ಮತ್ತೊಂದು ಸಿದ್ಧಾಂತಕ್ಕೆ, ಪಕ್ಷದಿಂದ ಪಕ್ಷಕ್ಕೆ ಹಾರುವ ಮುಖ್ಯಮಂತ್ರಿಯವರು ವಲಸೆ ಹಕ್ಕಿ ಎನಿಸಿದ್ದಾರೆ ಎಂದು ಚುಚ್ಚಿದ್ದಾರೆ.
‘ತಾವು ಪ್ರತಿನಿಧಿಸುತ್ತಿದ್ದ ಕ್ಷೇತ್ರದ ಜನರ ವಿಶ್ವಾಸ ಕಳೆದುಕೊಂಡಿರುವ ಸಿದ್ದರಾಮಯ್ಯ, ಸೋಲುವ ಭಯದಿಂದ ಮತ್ತೊಂದು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ. ಅವರು ಎಲ್ಲೇ ಸ್ಪರ್ಧಿಸಲಿ, ಸೋಲು ಕಟ್ಟಿಟ್ಟ ಬುತ್ತಿ’ ಎಂದು ಸಚಿವರು ಭವಿಷ್ಯ ನುಡಿದಿದ್ದಾರೆ.