ಬೆಂಗಳೂರು: ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಶುಕ್ರವಾರ 3 ನಾಮಪತ್ರಗಳು ಸಲ್ಲಿಕೆಯಾದವು. ಕಾರ್ಯಕರ್ತರ ಹೆಚ್ಚಿನ ಪ್ರಮಾಣದಲ್ಲಿ ಜಮಾಯಿಸಿದ್ದರಿಂದ ಒಂದು ತಾಸಿಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಲಾಗಿತ್ತು.
ಮಧ್ಯಾಹ್ನ 2.30ಕ್ಕೆ ಬಿಜೆಪಿ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಯ ಸುತ್ತಮುತ್ತ ಸಾವಿರಾರು ಜನರು ಜಮಾಯಿಸಿದ್ದರು. ಇದಕ್ಕೂ ಮುನ್ನ ಮಧ್ಯಾಹ್ನ 1 ಗಂಟೆಯಿಂದ ಬ್ಯಾಟರಾಯನಪುರ-ಅಮೃತಹಳ್ಳಿ ಮುಖ್ಯರಸ್ತೆಯನ್ನು ಬಂದ್ ಮಾಡಲಾಗಿತ್ತು.
3 ಗಂಟೆಗೂ ಹೆಚ್ಚು ಕಾಲ ರಸ್ತೆ ಬಂದ್ ಮಾಡಿದ್ದರಿಂದ ಈ ಮಾರ್ಗವಾಗಿ ಜಕ್ಕೂರು, ಟೆಲಿಕಾಂ ಬಡಾವಣೆ, ಶ್ರೀರಾಮಪುರ ಸಂಪಿಗೇಹಳ್ಳಿ, ಹೆಗ್ಗಡೆ ನಗರಗಳಿಗೆ ತೆರಳಬೇಕಾದ ವಾಹನ ಸವಾರರು ತೊಂದರೆ ಅನುಭವಿಸಿದರು.
ಪಾದಚಾರಿಗಳಿಗೂ ಪ್ರವೇಶ ನಿರ್ಬಂಧಿಸಿದ್ದರಿಂದ ವೃದ್ದರು, ಮಹಿಳೆಯರು ಹಾಗೂ ಮಕ್ಕಳು ಪೊಲೀಸರಿಗೆ ಹಾಗೂ ಚುನಾವಣಾ ಆಯೋಗಕ್ಕೆ ಹಿಡಿಶಾಪ ಹಾಕಿದರು. ಕೆಲವರು ಪರ್ಯಾಯ ಮಾರ್ಗದ ಮೂಲಕ ತೆರಳಿದರು. ಇನ್ನು ಕೆಲವರು ಅನ್ಯ ಮಾರ್ಗವಿಲ್ಲದೆ, ಗಂಟೆಗಟ್ಟಲೆ ಬಿಸಿಲಿನಲ್ಲಿಯೇ ಬಳಲಿದರು.
ಶರತ್ ಕುಮಾರ್ ಪತ್ರ ಸಲ್ಲಿಕೆ: ಬಿಜೆಪಿ ಪಕ್ಷದ ಅಭ್ಯರ್ಥಿ ಶರತ್ ಕುಮಾರ್ ಬಚ್ಚೇಗೌಡ ಶುಕ್ರವಾರ ನಾಮಪತ್ರ ಸಲ್ಲಿಸಿದರು.
ತಂದೆ ಬಿ.ಎನ್.ಬಚ್ಚೇಗೌಡ ಮತ್ತು ಪತ್ನಿ ಜೊತೆ ಪಕ್ಷದ ಕಚೇರಿಯಿಂದ ಕಾರ್ಯಕರ್ತರ ಜತೆ ಮೆರವಣಿಗೆಯಲ್ಲಿ ಹೊಸಕೋಟೆ ತಾಲ್ಲೂಕು ಕಚೇರಿಗೆ ಬಂದು ನಾಮಪತ್ರ ಸಲ್ಲಿಸಿದರು.
ಬಿಇ, ಎಂಎಸ್(ಯುಎಸ್ಎ) ವಿದ್ಯಾರ್ಹತೆ ಪಡೆದಿರುವ ಇವರು, ₹32.69 ಕೋಟಿ ಚರಾಸ್ತಿ ಹಾಗೂ ₹57.50 ಕೋಟಿ ಸ್ಥಿರಾಸ್ತಿ ಹೊಂದಿದ್ದಾಗಿ ಘೋಷಿಸಿಕೊಂಡಿದ್ದಾರೆ.