ನೆಲಮಂಗಲ: ‘ನಾವೆಲ್ಲ ನಮ್ಮ ಪರಂಪರೆಯ ಪ್ರತಿನಿಧಿಗಳು. ಅದನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವುದು ನಮ್ಮೆಲ್ಲರ ಜವಾಬ್ದಾರಿ’ ಎಂದು ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಒಡೆಯರ್ ಅಭಿಪ್ರಾಯ ವ್ಯಕ್ತಪಡಿಸಿದರು.
ವಿಎಸ್ಆರ್ ಪ್ರತಿಷ್ಠಾನದಿಂದ ಬೈರವೇಶ್ವರನಗರದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮೀವೆಂಕಟರಮಣ ಸ್ವಾಮಿ, ಭೂ ವರಾಹ ಸ್ವಾಮಿ ದೇವಾಲಯ ಉದ್ಘಾಟಿಸಿ ಮಾತನಾಡಿದರು.
ಅತ್ಯಂತ ವಿರಳವಾಗಿರುವ ಭೂ ವರಾಹ ಸ್ವಾಮಿ ದೇವಸ್ಥಾನ ನೆಲಮಂಗಲದಲ್ಲಿ ಪ್ರತಿಷ್ಠಾಪನೆಯಾಗಿದೆ. ಇದು ರಾಜ್ಯದಲ್ಲಿ ಸ್ಥಾಪನೆಯಾಗಿರುವ ಮೂರನೇ ದೇವಸ್ಥಾನವಾಗಿದೆ.
ವಿಎಸ್ಆರ್ ಪ್ರತಿಷ್ಠಾನದ ಸಂಸ್ಥಾಪಕ ರಾಮಚಂದ್ರ, ‘ಮೈಸೂರು ಸಂಸ್ಥಾನಕ್ಕೂ ಗಾಣಿಗ ಸಮುದಾಯಕ್ಕೂ 200 ವರ್ಷಗಳ ಇತಿಹಾಸವಿದೆ. ಹಿಂದಿನ ಮಹಾರಾಜರು ಕೆ.ಆರ್.ಮಾರುಕಟ್ಟೆಯಲ್ಲಿ ಗಾಣಿಗ ಸಮುದಾಯಕ್ಕೆ ಭೂಮಿ ಮಂಜೂರು ಮಾಡಿದ್ದರು’ ಎಂದರು.
ಗಣಪತಿ, ಆಂಜನೇಯ, ನವಗ್ರಹಗಳನ್ನು ಸಹ ಪ್ರತಿಷ್ಠಾಪಿಸಲಾಗಿದೆ. ಮುಂದಿನ ದಿನಗಳಲ್ಲಿ ದೇವಸ್ಥಾನದ ವತಿಯಿಂದ ರಥೋತ್ಸವ, ಮುಂಜಿ ಇತರ ಸಮಾಜಮುಖಿ ಕೆಲಸಗಳನ್ನು ಮಾಡಲಾಗುವುದು ಎಂದು ಅವರು ತಿಳಿಸಿದರು.