ಹುಣಸಗಿ: ಏ.2 ರಂದು ನಡೆದ ಭಾರತ ಬಂದ್ ಪ್ರತಿಭಟನೆಯಲ್ಲಿ ಪ್ರಾಣ ಕಳೆದುಕೊಂಡ ದಲಿತರ ಕುಟುಂಬದವರಿಗೆ ತಲಾ ₹ 1 ಕೋಟಿ ಪರಿಹಾರ ಹಾಗೂ ಕುಟುಂಬದ ಸದಸ್ಯರೊಬ್ಬರಿಗೆ ಒಬ್ಬರಿಗೆ ಕೇಂದ್ರ ಸರ್ಕಾರದ ನೌಕರಿ ನೀಡುವಂತೆ ಹುಣಸಗಿಯ ದಲಿತ ಸಂಘಟನೆಗಳ ಪದಾಧಿಕಾರಿಗಳು ಒತ್ತಾಯಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಶುಕ್ರವಾರ ಇಲ್ಲಿನ ಡಾ.ಅಂಬೇಡ್ಕರ್ ವೃತ್ತದಲ್ಲಿ ಇಲ್ಲಿನ ದಲಿತ ಪರ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ದಲಿತ ಮುಖಂಡರಾದ ಮಲ್ಲಣ್ಣ ಕಟ್ಟಿಮನಿ ಹಾಗೂ ಮರಲಿಂಗಪ್ಪ ನಾಟೇಕಾರ ಮಾತನಾಡಿ, ಇತ್ತೀಚಿಗೆ ಸರ್ವೋಚ್ಛ ನ್ಯಾಯಾಲಯವು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಮೇಲಿನ ದೌರ್ಜನ್ಯ ಕಾಯ್ದೆಯ ಬಗ್ಗೆ ನೀಡಿರುವ ತೀರ್ಪಿನ ಪ್ರಕರಣದಲ್ಲಿ ಕೇಂದ್ರ ಸರ್ಕಾರದ ಕಾನೂನು ಇಲಾಖೆಯ ಕಾರ್ಯದರ್ಶಿಗಳ ಲೋಪ ಹಾಗೂ ಸಮರ್ಥವಾಗಿ ವಾದ ಮಂಡಿಸುವಲ್ಲಿ ವಿಫಲರಾದ ಸರ್ಕಾರಿ ವಕೀಲರನ್ನು ಕೂಡಲೆ ಅಮಾನತುಗೊಳಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಪುನರ್ ಪರಿಶೀಲನಾ ಅರ್ಜಿಯ ಪರವಾಗಿ ವಾದ ಮಂಡಿಸಲು ಸಮರ್ಥರಾದ ವಕೀಲರನ್ನು ನೇಮಿಸುವಂತೆ ಆಗ್ರಹಿಸಿದರು. ರಾಷ್ಟ್ರಪತಿಗಳಿಗೆ ಬರೆದ ಮನವಿಪತ್ರವನ್ನು ಕಂದಾಯ ಇಲಾಖೆಯ ಬಸವರಾಜ ಬಿರಾದಾರ್ ಅವರಿಗೆ ಸಲ್ಲಿಸಲಾಯಿತು.