ಬೇಲೂರು: ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ ಹೆಡ್ಕಾನ್ಸ್ಟೆಬಲ್, ಲಾರಿಯಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಸಹಕರಿಸುತ್ತಿದ್ದನ್ನು ತಹಶೀಲ್ದಾರ್ ಪತ್ತೆ ಮಾಡಿದ್ದಾರೆ. ಹೆಡ್ಕಾನ್ಸ್ಟೆಬಲ್ ಕುಮಾರ್ ಹಾಗೂ ಲಾರಿ ಚಾಲಕ ದೇವರಾಜ್ ಎಂಬುವರನ್ನು ಬಂಧಿಸಲಾಗಿದೆ.
ಶುಕ್ರವಾರ ರಾತ್ರಿ ಹಗರೆ ಚೆಕ್ ಪೋಸ್ಟ್ ಬಳಿ ತಹಶೀಲ್ದಾರ್ ಜೆ.ಉಮೇಶ್ ಪರಿಶೀಲನೆಗೆ ಹೋಗಿದ್ದರು. ಆಗ ಹಳೇಬೀಡು ಕಡೆಯಿಂದ ಟಿಪ್ಪರ್ ಲಾರಿ ಬಂದಿದೆ. ನಿಲ್ಲಿಸುವಂತೆ ಚಾಲಕನಿಗೆ ಸೂಚಿಸಿದರೂ ವೇಗವಾಗಿ ಚಾಲನೆ ಮಾಡಿದ್ದಾರೆ. ಬಳಿಕ ತಹಶೀಲ್ದಾರ್ ತಡೆದು ನಿಲ್ಲಿಸಿದ್ದಾರೆ. ಆ ವೇಳೆ ಲಾರಿಯಲ್ಲಿದ್ದ ಹೆಡ್ಕಾನ್ಸ್ಟೆಬಲ್ ಮತ್ತು ಚಾಲಕ ದೇವರಾಜ್ ಕೆಳಗಿಳಿದಿದ್ದಾರೆ.
ತಹಶೀಲ್ದಾರ್ ಎನ್ನುವುದನ್ನು ಅರಿಯದೆ ಅವರ ಹೆಗಲ ಮೇಲೆ ಕೈಹಾಕಿ ‘ಅಕ್ರಮವಾಗಿ ಮರಳು ಸಾಗಿಸುವುದು ಮಾಮೂಲು. ಹಿರಿಯ ಅಧಿಕಾರಿಗಳಿಗೆ ಇದು ಗೊತ್ತಿದೆ. ಮೇಲಧಿಕಾರಿಗಳ ಗಮನಕ್ಕೆ ತಂದು ಮರಳು ಸಾಗಿಸುತ್ತಿರುವುದಾಗಿ’ ಕುಮಾರ್ ಅವರು ತಿಳಿಸಿದ್ದಾರೆ.
ತಹಶೀಲ್ದಾರ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಕೂಡಲೇ ಸ್ಥಳಕ್ಕೆ ಬಂದ ಸಿಪಿಐ ಯೋಗೇಶ್ ಮತ್ತು ಹಳೇಬೀಡು ಪಿಎಸ್ಐ, ಕುಮಾರ್ ಮತ್ತು ದೇವರಾಜ್ನನ್ನು ಬಂಧಿಸಿದ್ದಾರೆ.
ಬಂಧಿತ ಹೆಡ್ಕಾನ್ಸ್ಟೆಬಲ್ ಚುನಾವಣೆಯಲ್ಲಿ ಪ್ಲೈಯಿಂಗ್ ಸ್ಕ್ವಾಡ್ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಕೆಲಸ ಮಾಡುವುದು ಬಿಟ್ಟು ಮರಳು ಸಾಗಣೆ ಲಾರಿಗಳಿಗೆ ಭದ್ರತೆ ನೀಡಿ, ಚೆಕ್ಪೋಸ್ಟ್ನಲ್ಲಿ ತಡೆಯದಂತೆ ನೋಡಿಕೊಳ್ಳುತ್ತಿದ್ದರು.