ತುಮಕೂರು: ವರಮಹಾಲಕ್ಷ್ಮಿ ಹಬ್ಬದ ಸಿದ್ಧತೆ, ಸಂಭ್ರಮದಲ್ಲಿ ನೀವು ಮೈಮರೆತರೆ ನಿಮ್ಮ ಲಕ್ಷ್ಮಿ ರೂಪದ ಹಣ, ಚಿನ್ನ ಕಳ್ಳರ ಪಾಲು!
ಇದು ತುಮಕೂರು ನಗರ ಪೊಲೀಸ್ ಠಾಣೆಯು ಸಾರ್ವಜನಿಕರಿಗೆ ವರ ಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ನೀಡಿರುವ ಎಚ್ಚರಿಕೆ ಇದು.
ಸಾರ್ವಜನಿಕರು ಅನುಸರಿಸಬೇಕಾದ ಕೆಲ ಮುಂಜಾಗ್ರತಾ ಕ್ರಮಗಳ ಬಗ್ಗೆಯೂ ಜಾಗೃತಿ ಮೂಡಿಸಲು ಕರಪತ್ರಗಳನ್ನು ಹಂಚಿದೆ.
ವರ ಮಹಾಲಕ್ಷ್ಮಿಯನ್ನು ಮನೆಯಲ್ಲಿ ಎಲ್ಲೆಂದರಲ್ಲಿ ಪ್ರತಿಷ್ಠಾಪಿಸದೇ ಮನೆಯ ಸುರಕ್ಷಿತ ಸ್ಥಳದಲ್ಲಿ ಪ್ರತಿಷ್ಠಾಪಿಸಬೇಕು, ಕಿಟಕಿ, ಬಾಗಿಲು, ವೆಂಟಿಲೇಟರ್ನಿಂದ ದೂರ ಇರುವಂತೆ ನೋಡಿಕೊಳ್ಳಬೇಕು, ಮಲಗುವ ಮುನ್ನ ದೇವರ ಮೇಏಲೆ ಹಾಕಿರುವ ಆಭರಣಗಳನ್ನು ತೆಗೆದು ಸುರಕ್ಷಿಯವಾಗಿಟ್ಟು ಮಲಗಬೇಕು ಎಂದು ಹೇಳಿದೆ.
ಹಬ್ಬದ ದಿನ ಬೇರೆಯವರ ಮನೆಗೆ ಕುಂಕುಮಕ್ಕೆ ಹೋಗುವಾಗ ಬೀಗ ಹಾಕದಂತೆ ಮನೆಯಲ್ಲಿ ಯಾರಾದರೂ ಒಬ್ಬರು ಇರುವಂತೆ ನೋಡಿಕೊಳ್ಳಬೇಕು, ಸಾಧ್ಯವಾದಷ್ಟು ಅಪರಿಚಿತರು ಮನೆಗೆ ಬರದಂತೆ ನೋಡಿಕೊಳ್ಳಬೇಕು, ಯಾರಾದರೂ ಪದೇ ಪದೇ ನೀವು ವಾಸಿಸುವ ಸ್ಥಳದ ಸುತ್ತಮುತ್ತ ಸಂಚರಿಸಿದರೆ ಪೊಲೀಸ್ ಠಾಣೆಯ ಗಮನಕ್ಕೆ ತರಬೇಕು ಎಂದು ತಿಳಿಸಿದೆ.
ಹಬ್ಬಕ್ಕೆ ಸರಕು, ಸಾಮಗ್ರಿ ತರುವಾಗ ಮಾರುಕಟ್ಟೆ ಹಾಗೂ ಬೀದಿಗಳಲ್ಲಿ ಅಪರಿಚಿತರ ಬಗ್ಗೆ ನಿಗಾವಹಿಸಬೇಕು, ಹಬ್ಬಕ್ಕೂ ಮುಂಚೆ ಮತ್ತು ನಂತರ ಬ್ಯಾಂಕ್ ಮತ್ತು ಲಾಕರ್ನಲ್ಲಿರುವ ಆಭರಣ ತರುವಾಗ ಮತ್ತು ವಾಪಸ್ ಲಾಕರ್ಗೆ ಇಡುವಾಗ ಒಬ್ಬರೆ ಹೋಗದಂತೆ ಜೊತೆಯಲ್ಲಿ ಮತ್ತೊಬ್ಬರನ್ನು ಕರೆದುಕೊಂಡು ಹೋಗಬೇಕು ಎಂದು ಸಲಹೆ ನೀಡಿದೆ.
ಹಬ್ಬದ ಮುಂಚೆ ಮತ್ತು ನಂತರ ಬ್ಯಾಂಕ್ ಮತ್ತು ಲಾಕರ್ನಲ್ಲಿರುವ ಆಭರಣ ತರುವಾಗ ಮತ್ತು ವಾಪಸ್ ಲಾಕರ್ಗೆ ಇಡಲು ಹೋಗುವಾಗ ರಸ್ತೆಯಲ್ಲಿ ಯಾರಾದರೂ ಅಪರಿಚಿತರು ನಿಮ್ಮ ಬಟ್ಟೆಗೆ ಬಣ್ಣ ಬಿದ್ದಿದೆ. ಕೆಸರು ಆಗಿದೆ ಎಂದು ಗಮನ ಬೇರೆ ಕಡೆ ಸೆಳೆದು ನಿಮ್ಮಲ್ಲಿರುವ ಹಣ ಮತ್ತು ಆಭರಣಗಳನ್ನು ಕಳವು ಮಾಡುವ ಸಾಧ್ಯತೆ ಇದೆ. ಇಂತಹವರ ಬಗ್ಗೆ ಎಚ್ಚರಿಕೆ ಇರಬೇಕು. ತಕ್ಷಣ ಪೊಲೀಸ್ ಠಾಣೆಗೆ ದೂರು ಸಲ್ಲಿಸಬೇಕು ಎಂದು ಸೂಚಿಸಿದೆ.
ಹಬ್ಬದ ದಿನ ಬೇರೆಯವರ ಮನೆಗೆ ಕುಂಕುಮಕ್ಕೆ ಹೋಗುವಾಗ ಮತ್ತು ಬರುವಾಗ ನೀವು ಧರಿಸಿರುವ ಆಭರಣಗಳ ಬಗ್ಗೆ ನಿಗಾವಹಿಸಬೇಕು. ಪಲ್ಸರ್ ಬೈಕಿನಲ್ಲಿ ಅನುಮಾನಾಸ್ಪದವಾಗಿ ಹೊಂಚು ಹಾಕುತ್ತಿರುವವರ ಬಗ್ಗೆ ಎಚ್ಚರಿಕೆ ವಹಿಸಬೇಕು. ತಕ್ಷಣ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಮನವಿ ಮಾಡಿದೆ.
ಸಂಪರ್ಕಿಸಬೇಕಾದ ದೂರವಾಣಿಗಳು: 0816–2278000 (ಕಂಟ್ರೋಲ್ ರೂಂ), 2278388 (ನಗರ ಠಾಣೆ), 9480802945(ಪಿ.ಎಸ್.ಐ), 2270207 (ಸಿಪಿಐ ಕಚೇರಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.