ತಾಳಿಕೋಟೆ:ತಾಲ್ಲೂಕಿನ ಕೊಣ್ಣೂರ ಕ್ರಾಸ್ ಬಳಿ ಗುರುವಾರ ಮುಸ್ಸಂಜೆ ಮರಳು ತುಂಬಿದ ಟಿಪ್ಪರ್, ಸಾರಿಗೆ ಸಂಸ್ಥೆಯ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ಸ್ಥಳದಲ್ಲೇ ಮೃತಪಟ್ಟು, 36 ಜನರು ಗಾಯಗೊಂಡಿದ್ದಾರೆ.
ಕೊಣ್ಣೂರ ಗ್ರಾಮದ ಕೆನರಾ ಬ್ಯಾಂಕ್ನ ಕ್ಯಾಷಿಯರ್ ವಿನೋದ ಬಾಕಲಿ (28) ಬಸ್ ಕೆಳಗೆ ಸಿಲುಕಿ ಮೃತಪಟ್ಟರೇ, ಮಸಬಿನಾಳ ಗ್ರಾಮದ ಅಮೃತಾ ಯಳಮೇಲಿ (4) ಕಾಲ್ತುಳಿತಕ್ಕೆ ಸಿಲುಕಿ ಅಸುನೀಗಿದ್ದಾಳೆ. ಟಿಪ್ಪರ್ ಚಾಲಕ ಬಸ್ ಕೆಳಗೆ ಸಿಲುಕಿ ಗಂಭೀರ ಗಾಯಗೊಂಡಿದ್ದಾರೆ.
ಬಸ್ನಲ್ಲಿ 54 ಜನರು ಪ್ರಯಾಣಿಸುತ್ತಿದ್ದರು. ಗಾಯಾಳುಗಳಿಗೆ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ಬಳಿಕ, ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ವಿಜಯಪುರದಿಂದ ತಾಳಿಕೋಟೆಗೆ ಚಲಿಸುತ್ತಿದ್ದ ಮೀರಜ್-ತಾಳಿಕೋಟೆ ಬಸ್ಗೆ, ತಾಳಿಕೋಟೆಯಿಂದ ಎದುರಿಗೆ ಬಂದ ಮರಳು ತುಂಬಿದ್ದ ಟಿಪ್ಪರ್ ಮುಖಾಮುಖಿ ಡಿಕ್ಕಿ ಹೊಡೆದು ಈ ಅಪಘಾತ ನಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ವಾಹನ ಉರುಳಿ ಬಿದ್ದಿವೆ.
ಕೈ ಜೋಡಿಸಿದ ಸ್ಥಳೀಯರು: ಅಪಘಾತದ ಸುದ್ದಿ ತಿಳಿದೊಡನೆ ಘಟನೆ ಸ್ಥಳಕ್ಕೆ ತಂಡೋಪ ತಂಡವಾಗಿ ಸ್ಥಳೀಯರು ಧಾವಿಸಿ ಸಂಕಷ್ಟದಲ್ಲಿದ್ದ ಗಾಯಾಳುಗಳಿಗೆ ನೆರವು ಒದಗಿಸಿದರು. ಬಸ್ನಲ್ಲಿದ್ದ ಜನರನ್ನು ಹೊರ ತರಲು ಶ್ರಮಿಸಿದರು.
ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಸ್ಥಳಕ್ಕೆ ಭೇಟಿ ನೀಡಿದರೆ, ಮಾಜಿ ಸಚಿವ ಸಿ.ಎಸ್.ನಾಡಗೌಡ ತಾಳಿಕೋಟೆ ಆಸ್ಪತ್ರೆಗೆ ಬಂದು ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು.