ನವದೆಹಲಿ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ವಿರುದ್ಧ ವಾಗ್ದಂಡನೆ ವಿಧಿಸಲು ಕಾಂಗ್ರೆಸ್ ನೇತೃತ್ವದಲ್ಲಿ ವಿರೋಧ ಪಕ್ಷಗಳು ಸಲ್ಲಿಸಿರುವ ನಿಲುವಳಿ ಸೂಚನೆಯನ್ನು ರಾಜ್ಯಸಭೆಯ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ಸೋಮವಾರ ತಿರಸ್ಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ನಿರ್ಧಾರ ತೆಗೆದುಕೊಳ್ಳುವ ಮೊದಲು ವೆಂಕಯ್ಯ ನಾಯ್ಡು ಅವರು ಉನ್ನತ ಕಾನೂನು ಮತ್ತು ಸಂವಿಧಾನಿಕ ತಜ್ಞರ ಜತೆ ವ್ಯಾಪಕವಾದ ಸಮಾಲೋಚನೆ ನಡೆಸಿದರು ಎಂದು ಅವರು ಹೇಳಿದ್ದಾರೆ.
ವಿಷಯದ ಗಂಭೀರತೆ ಅರಿತು ತಮ್ಮ ಹೈದರಾಬಾದ್ ಪ್ರವಾಸ ಮೊಟಕುಗೊಳಿಸಿದ್ದ ವೆಂಕಯ್ಯ ನಾಯ್ಡು ಅವರು, ಭಾನುವಾರ ದೆಹಲಿಗೆ ಹಿಂತಿರುಗಿ ತಜ್ಞರ ಸಲಹೆ, ಸೂಚನೆಗಳನ್ನು ಪಡೆದುಕೊಂಡಿದ್ದರು.
ಸಮಾಲೋಚನೆ ಬಳಿಕ ನಾಯ್ಡು ಅವರು, ವಿರೋಧ ಪಕ್ಷಗಳು ಸಲ್ಲಿಸಿದ್ದ ವಾಗ್ದಂಡನೆ ನಿಲುವಳಿ ಸೂಚನೆಯನ್ನು ತಿರಸ್ಕರಿಸಿದ್ದಾರೆ.
ದೀಪಕ್ ಮಿಶ್ರಾ ಅವರ ವಿರುದ್ಧ ವಾಗ್ದಂಡನೆ ವಿಧಿಸಲು ಕಾಂಗ್ರೆಸ್ ನೇತೃತ್ವದಲ್ಲಿ ಆರು ವಿರೋಧ ಪಕ್ಷಗಳು ಶುಕ್ರವಾರ ನಿಲುವಳಿ ಸೂಚನೆ ಸಲ್ಲಿಸಿದ್ದವು. ವಿರೋಧಪಕ್ಷಗಳು ಸುದ್ದಿಗೋಷ್ಠಿ ನಡೆಸಿ, ನಿಲುವಳಿ ಸೂಚನೆ ಸಲ್ಲಿಸಲಾಗುವುದು ಎಂದು ಹೇಳಿದ್ದರು. ಇದಕ್ಕೆ ಹೆಚ್ಚಿನ ಪ್ರಚಾರ ದೊರೆತಿತ್ತು.