ಕಲಬುರ್ಗಿ: ಯಡ್ರಾಮಿ ತಾಲ್ಲೂಕಿನ ಕುರಳಗೇರಾ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಅಕಾಲಿಕ ಮಳೆಯಿಂದ ಭತ್ತದ ಬೆಳೆ ಹಾನಿಯಾಗಿದ್ದು, ಪರಿಹಾರ ನೀಡುವಂತೆ ಕೋರಿ ಗ್ರಾಮಸ್ಥರು ಶನಿವಾರ ಜಿಲ್ಲಾಧಿಕಾರಿಗೆ ಮನವಿಪತ್ರ ಸಲ್ಲಿಸಿದರು.
‘ಸಮೃದ್ಧವಾಗಿ ಬೆಳೆದು ನಿಂತಿದ್ದ ಭತ್ತದ ಬೆಳೆಯು ಆಲಿಕಲ್ಲು ಮಳೆ ಮತ್ತು ಗಾಳಿಯಿಂದ ಸಂಪೂರ್ಣ ನೆಲಸಮವಾಗಿದೆ. ಆರ್ಥಿಕ ನಷ್ಟದಿಂದ ದಿಕ್ಕು ತೋಚದಂತಾಗಿದೆ. ಬೆಳೆ ಹಾನಿಗೆ ಪ್ರತಿ ಎಕರೆಗೆ ₹ 40 ಸಾವಿರ ಪರಿಹಾರ ನೀಡಬೇಕು. ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಕೂಡಲೇ ಸ್ಪಂದಿಸಬೇಕು’ ಎಂದು ಅವರು ಕೋರಿದರು.
‘ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಬೆಳೆ ಹಾನಿಗೀಡಾದ ಪ್ರದೇಶಕ್ಕೆ ಭೇಟಿ ನೀಡಿ, ಸಮೀಕ್ಷೆ ಮಾಡಬೇಕು. ರೈತರನ್ನು ಸಂಕಷ್ಟದಿಂದ ಪಾರು ಮಾಡಲು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.ರೈತರಾದ ನಂದಪ್ಪ ಸಾಹು, ಮಲ್ಲನಗೌಡ, ರಮೇಶಗೌಡ, ಶರಣಗೌಡ ಮತ್ತು ಭೀಮಣ್ಣ ಇದ್ದರು.