ಕೋಲಾರ: ‘ಮಕ್ಕಳಲ್ಲಿ ಪರಿಸರ ಕಾಳಜಿ ಮೂಡಿಸಲು ಶಿಬಿರಗಳು ಸಹಕಾರಿಯಾಗಿವೆ’ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಜಿಲ್ಲಾ ಆಯುಕ್ತ ಕೆ.ಆರ್.ಸುರೇಶ್ ತಿಳಿಸಿದರು.
ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಬೇತಮಂಗಲದಲ್ಲಿ ರಾಜ್ಯ ಪುರಸ್ಕಾರ ಪೂರ್ವ ಸಿದ್ಧತಾ ಶಿಬಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಭೂಮಿ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಮಕ್ಕಳಿಗೆ ಸಣ್ಣ ಕತೆಗಳ ಮೂಲಕ ಪರಿಸರ ಸಂರಕ್ಷಣೆ ಮಾಡುವ ಬಗೆಯನ್ನು ಅರಿವು ಮೂಡಿಸಲಾಗುತ್ತಿದೆ’ ಎಂದರು.
‘ಭೂಮಿ ನಮ್ಮೆಲ್ಲರ ಆಸ್ತಿ. ನಮ್ಮ ಸ್ವಾರ್ಥಕ್ಕಾಗಿ ಕಲುಷಿತ ಮಾಡುತ್ತಾ ಹೋದರೆ ಮುಂದಿನ ಭವಿಷ್ಯ ಸಂಪೂರ್ಣವಾಗಿ ವಿಷಮಯ ವಾಗುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಉಳಿಸುವ ಮತ್ತು ಬೆಳೆಸುವ ಕಾಳಜಿಯನ್ನು ಮೈಗೂಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
‘ನೈಸರ್ಗಿಕ ಸಂಪನ್ಮೂಲಗಳ ಮಾರಣ ಹೋಮ ಹಾಗೂ ಅತಿಯಾದ ಮಾಲಿನ್ಯದ ಪ್ರಭಾವದಿಂದಾಗಿ ಭೂಮಿ ಯಲ್ಲಿ ತಾಪಮಾನ ಏರಿಕೆಯಾಗು ತ್ತಿದ್ದು, ಈ ಬಗ್ಗೆ ಮುಂದಿನ ಪೀಳಿಗೆಯಲ್ಲಿ ಅರಿವು ಮೂಡಿಸುವ ಅಗತ್ಯವಿದೆ’ ಎಂದು ಸಂಸ್ಥೆಯ ಜಿಲ್ಲಾ ಸಂಘಟನಾ ಆಯುಕ್ತ ವಿ.ಬಾಬು ಅಭಿಪ್ರಾಯಪಟ್ಟರು.
ಭೂಮಿ ದಿನಾಚರಣೆ ಅಂಗವಾಗಿ ಶಿಬಿರದಲ್ಲಿ ಏರ್ಪಡಿಸಿದ್ದ ಚಿತ್ರಕಲೆ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ ಗಳಿಗೆ ಮಹುಮಾನ ವಿತರಿಸಲಾ ಯಿತು. ಗ್ರಾಮದ ಪ್ರಮುಖ ಬೀದಿಗಳಲ್ಲಿ ಜಾಗೃತಿ ಜಾಥಾ ನಡೆಸಲಾಯಿತು.