ಶಿಕಾರಿಪುರ: ವಿದ್ಯಾರ್ಥಿ ಸಂಘಟನೆ ರಾಜ್ಯ ಘಟಕ ಅಧ್ಯಕ್ಷ ವಿನಯ್ ಕೆ.ಸಿ. ರಾಜಾವತ್ ಪಕ್ಷೇತರ ಅಭ್ಯರ್ಥಿಯಾಗಿ ಕಣಕಿಳಿದಿದ್ದು, ನಾಮಪತ್ರ ಸಲ್ಲಿಸಲು ಶನಿವಾರ ಬೆಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಪಟ್ಟಣಕ್ಕೆ ಬಂದು ತಾಲ್ಲೂಕಿನ ಜನತೆಯ ಗಮನ ಸೆಳೆದರು.
ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ತವರು ಕ್ಷೇತ್ರದಲ್ಲಿ ವಿನಯ್ ಅಖಾಡಕ್ಕೆ ಇಳಿದಿದ್ದಾರೆ. ನಾಮಪತ್ರ ಸಲ್ಲಿಸುವ ಹುಮ್ಮಸಿನಲ್ಲಿದ್ದ ವಿನಯ್ ಅವರನ್ನು ಸ್ನೇಹಿತರೆಲ್ಲ ಸೇರಿ ಹಾರ ಹಾಕಿ ಸ್ವಾಗತಿಸಿದರು. ನಂತರ ವಿನಯ್ ಹೆಲಿಕಾಪ್ಟರ್ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡರು. ಬಳಿಕ ಹುಚ್ಚರಾಯಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಬಂದ ವಿನಯ್ ನಾಮಪತ್ರ ಸಲ್ಲಿಸಿದರು.
ಸಹ್ಯಾದ್ರಿ ಕಾಲೇಜಿನ ಹಳೆಯ ವಿದ್ಯಾರ್ಥಿಯಾಗಿರುವ ವಿನಯ್ ಅವರಿಗೆ ಸ್ನೇಹಿತರೇ ಹಣ ಸೇರಿಸಿ ಹೆಲಿಕಾಪ್ಟರ್ನಲ್ಲಿ ಇಲ್ಲಿಗೆ ಬರಲು ವ್ಯವಸ್ಥೆ ಮಾಡಿದ್ದರು ಎನ್ನಲಾಗಿದೆ.