ಪಂಕಜ್ ಬಾಲನ್ ನಿರ್ದೇಶನದ ಸಿನಿಮಾ ‘ಚಿನ್ನದ ಗೊಂಬೆ’ ಐವತ್ತು ದಿನಗಳ ಪ್ರದರ್ಶನ ಕಂಡಿದೆಯಂತೆ. ಈ ವಿಷಯವನ್ನು ಖುಷಿಯಿಂದ ಹಂಚಿಕೊಳ್ಳಲು ನಿರ್ಮಾಪಕ ಪಿ. ಕೃಷ್ಣಪ್ಪ ಪತ್ರಿಕಾಗೋಷ್ಠಿ ಕರೆದಿದ್ದರು.
ಕಾರ್ಯಕ್ರಮದಲ್ಲಿ ಮೊದಲು ಮಾತನಾಡಿದ್ದು ಚಿತ್ರದ ನಾಯಕ ಕೀರ್ತಿಕೃಷ್ಣ. ‘ಹೊಸಬರು ಸಿದ್ಧಪಡಿಸಿದ ಸಿನಿಮಾ ಐವತ್ತು ದಿನ ಓಡಿರುವುದು ಖುಷಿ ಕೊಡುತ್ತಿದೆ. ನನ್ನ ಸಿನಿಮಾ ಇಷ್ಟು ದಿನ ಓಡಿರುವುದಕ್ಕೆ ಕಾರಣ ನನ್ನ ಪಾಲಕರು ಮತ್ತು ಚಿತ್ರದ ನಿರ್ದೇಶಕರು’ ಎಂದರು ಕೀರ್ತಿಕೃಷ್ಣ.
ಈ ಚಿತ್ರ ಬಿಡುಗಡೆ ಆದ ನಂತರ ಕೀರ್ತಿಕೃಷ್ಣ ಅವರಿಗೆ ಒಳ್ಳೆಯ ಅವಕಾಶಗಳು ಬರುತ್ತಿವೆಯಂತೆ. ‘ಈ ತಿಂಗಳಲ್ಲಿ ಅಥವಾ ಮುಂದಿನ ತಿಂಗಳಲ್ಲಿ ನನ್ನ ಇನ್ನೊಂದು ಸಿನಿಮಾ ಜೊಲ್ ಪಾರ್ಟಿ ಬಿಡುಗಡೆ ಆಗುತ್ತಿದೆ’ ಎಂದರು.
ನಿರ್ಮಾಪಕ ಕೃಷ್ಣಪ್ಪ ಅವರು ಸಿನಿಮಾ ವಿಚಾರವಾಗಿ ತುಸು ಬೇಸರದಲ್ಲಿದ್ದರು. ‘ಚಿತ್ರ ನಿರ್ಮಾಣಕ್ಕಿಂತಲೂ ಅದನ್ನು ತೆರೆಗೆ ತರಲು ಹೆಚ್ಚು ಕಷ್ಟಪಡಬೇಕಾಗುತ್ತದೆ. ಆ ಕಷ್ಟವನ್ನು ನಾನು ಅನುಭವಿಸಿದ್ದೇನೆ’ ಎಂದರು. ಆದರೆ ಐವತ್ತು ದಿನ ಪೂರೈಸಿದ್ದರ ಬಗ್ಗೆ ಸಂತಸವಾಗಿರುವುದನ್ನೂ ಹಂಚಿಕೊಂಡರು.
ಕೃಷ್ಣಪ್ಪ ಅವರು ಸಿನಿಮಾಕ್ಕಾಗಿ ಸರಿಸುಮಾರು ಒಂದು ಕೋಟಿ ರೂಪಾಯಿ ಖರ್ಚು ಮಾಡಿದ್ದರಂತೆ. ಹೂಡಿದ್ದ ಮೊತ್ತ ಇಷ್ಟಾದರೆ, ಬಂದ ಮೊತ್ತ ಎಷ್ಟು ಎಂಬ ಪ್ರಶ್ನೆಗೆ ಅವರು ಉತ್ತರಿಸಲಿಲ್ಲ!