ರಾಜ್ ಅಂದ್ರೆ ಕನ್ನಡತನ, ಕನ್ನಡಿಗರ ಗುರುತು ಎಂಬಂತಾಗಿದ್ದು 80ರ ದಶಕದಲ್ಲಿ. 1983ರಲ್ಲಿ ನರನಾಡಿಗಳಲ್ಲಿ ಕನ್ನಡತನವನ್ನೇ ತುಂಬಿಕೊಂಡಿದ್ದ ಮುತ್ತಣ್ಣ ಅಂದು ರಕ್ತದಾನ ಮಾಡಿದರು. ರಕ್ತದಾನಕ್ಕೆ ಪ್ರೇರಣೆಯನ್ನೂ ನೀಡಿದರು. ವಿಧಾನಸೌಧದ ಮುಂದೆ ನಿಂತು, ಕನ್ನಡಿಗರ ಧ್ವನಿಯಾಗಿ ಮಾತನಾಡಿದಾಗ ಇಡೀ ಕರ್ನಾಟಕವೇ ಕಿವಿಯಾಗಿತ್ತು. 1984ರಲ್ಲಿ ಮೋದಿ ಆಸ್ಪತ್ರೆಯ ಆರಂಭೋತ್ಸವಕ್ಕೆ ರಾಜ್ ಮತ್ತು ಪಾರ್ವತಮ್ಮ ಜೋಡಿ ಹೋಗಿ, ಕಣ್ಣಿನ ಆರೋಗ್ಯ, ದೃಷ್ಟಿಯ ಮಹತ್ವವನ್ನು ಹೇಳಿ, ನೇತ್ರಚಿಕಿತ್ಸಾಶಿಬಿರಕ್ಕೆ ಚಾಲನೆ ನೀಡಿದ್ದರು. ರಾಜಣ್ಣನ ನಂತರವೂ ಅವರ ಕಂಗಳು ನಮ್ಮನ್ನೆಲ್ಲ ನೋಡುತ್ತಿವೆಯಲ್ಲ! ನೇತ್ರದಾನದ ಮಹತ್ವದ ಬಗ್ಗೆ ಕಣ್ತೆರೆಸಿದವರು ಅವರು. ರಾಜಕುಮಾರ್ ಹೆಸರಿನೊಂದಿಗೆ ಕರ್ನಾಟಕ ರತ್ನ ಬೆಸೆದಿದ್ದು 1992ರಲ್ಲಿ. ಎಸ್. ಎಂ. ಕೃಷ್ಣ, ರಾಜ್ಯಪಾಲ ಖುರ್ಷಿದ್ ಅಲಂ ಖಾನ್, ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಆ ಕ್ಷಣದಲ್ಲಿ ಅವರೊಟ್ಟಿಗೆ ಇದ್ದರು. ಚಿತ್ರ ಕಪ್ಪುಬಿಳುಪಾಗಿದ್ದರೂ ರಾಜಣ್ಣನ ಬದುಕಿನ ಬಣ್ಣಗಳೇ ಹಲವು.