ಕೋಲ್ಕತ್ತ: ‘ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡಗಳು ದ್ವಿಪಕ್ಷೀಯ ಟೂರ್ನಿಯನ್ನು ಆಡ ಬೇಕಾದರೆ ಭಾರತ ಸರ್ಕಾರ ಮನಸ್ಸು ಮಾಡಬೇಕು’ ಎಂದು ಪಾಕ್ ಕ್ರಿಕೆಟ್ ಮಂಡಳಿ ಮುಖ್ಯಸ್ಥ ನಜಾಮ್ ಸೇಥಿ ಅಭಿಪ್ರಾಯಪಟ್ಟರು.
ಸುದ್ದಿಸಂಸ್ಥೆಯ ಜೊತೆ ಮಾತನಾಡಿದ ಅವರು ‘ಉಪಖಂಡದ ಜನರು ಉಭಯ ರಾಷ್ಟ್ರಗಳ ನಡುವಿನ ಕ್ರಿಕೆಟ್ ಪಂದ್ಯ ನೋಡಲು ಉತ್ಸುಕರಾಗಿದ್ದಾರೆ. ಅವರ ಆಸೆಯನ್ನು ಈಡೇರಿಸಬೇಕಾಗಿದೆ. ಇದಕ್ಕೆ ಸಂಬಂಧಿಸಿದ ಚೆಂಡು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಅಂಗಣದಲ್ಲಿದೆ. ಅವರು ಮನಸ್ಸು ಮಾಡಿದರೆ ಭಾರತ ಸರ್ಕಾರದಿಂದ ಅನುಮತಿ ಪಡೆಯಬಹುದಾಗಿದೆ’ ಎಂದರು.
ಭಾರತ ಮತ್ತು ಪಾಕಿಸ್ತಾನ ನಡುವಿನ ರಾಜಕೀಯ ಬೆಳವಣಿಗೆಗಳು ಮತ್ತು ಭದ್ರತಾ ಸಮಸ್ಯೆಗಳ ಕಾರಣ ಎರಡೂ ದೇಶಗಳ ನಡುವೆ ಕ್ರಿಕೆಟ್ ಆಡಲು ಬಿಸಿಸಿಐಗೆ ಕೇಂದ್ರ ಸರ್ಕಾರ ಅನುಮತಿ ನೀಡಲಿಲ್ಲ. ಸದ್ಯ ಉಭಯ ದೇಶಗಳು ವಿಶ್ವಕಪ್, ಚಾಂಪಿಯನ್ಸ್ ಟ್ರೋಫಿ, ಏಷ್ಯಾ ಕಪ್ ಮುಂತಾದ ಟೂರ್ನಿಗಳಲ್ಲಿ ಮಾತ್ರ ಪರಸ್ಪರ ಸೆಣಸುತ್ತಿವೆ.