ಸಂತೇಮರಹಳ್ಳಿ: ಭೂಕಂಪನದಿಂದ ಭಾರಿ ಕಟ್ಟಡಗಳಿಗೆ ಆಗುವ ಹಾನಿ ತಪ್ಪಿಸಲು ಹೊಸ ತಂತ್ರಜ್ಞಾನದ ಅಗತ್ಯ ಇದೆ ಇದೆ ಎಂದು ಸಂಪನ್ಮೂಲ ವ್ಯಕ್ತಿ ಅಜಯ್ ಸಿಂಗ್ ತಿಳಿಸಿದರು.
ಸಮೀಪದ ಉಮ್ಮತ್ತೂರು ಗ್ರಾಮದ ಏಕಲವ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಇ-ಟ್ಯಾಬ್ ಸಾಫ್ಟ್ವೇರ್ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಭೂಕಂಪನದಿಂದ ಕಟ್ಟಡಗಳನ್ನು ರಕ್ಷಿಸಲು ಹೊಸ ಆವಿಷ್ಕಾರದ ಅಗತ್ಯವಿದೆ. ಈ ಕಾರಣದಿಂದ ವಿದ್ಯಾರ್ಥಿಗಳು ಇ-ಟ್ಯಾಪ್ ಸಾಫ್ಟ್ವೇರ್ ವಿನ್ಯಾಸಗೊಳಿಸಬೇಕಾಗಿದೆ. ರಿಕ್ಟರ್ ಮಾಪಕದ ಮೂಲಕ ಭೂಕಂಪನದ ತೀವ್ರತೆಯನ್ನು ಪತ್ತೆಹಚ್ಚಿ ಸಾಫ್ಟ್ವೇರ್ ಅಳವಡಿಸಿಕೊಳ್ಳುವ ಬಗ್ಗೆ ಅಧ್ಯಯನ ಮಾಡಬೇಕಾಗಿದೆ ಎಂದು ಅವರು ಸಲಹೆ ನೀಡಿದರು.
ಕಾಲೇಜಿನ ಅಧ್ಯಕ್ಷ ಗೋವಿಲ್ ಮಾತನಾಡಿ, ಭೂಕಂಪನದ ಆತಂಕ ಇರುವಾಗ ರಕ್ಷಣೆ ಪಡೆದುಕೊಳ್ಳುವುದು ಅಗತ್ಯವಾಗಿದೆ. ಹೊಸ ವಿನ್ಯಾಸವನ್ನು ತಯಾರಿಸುವ ಕಾರ್ಯಾಗಾರವನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಪ್ರಾಂಶುಪಾಲ ಪ್ರಕಾಶ್, ಸಂಪನ್ಮೂಲ ವ್ಯಕ್ತಿ ಶುಭಮ್ ವರ್ಮ, ಉಪನ್ಯಾಸಕರಾದ ಸುನಿಲ್ ಕುಮಾರ್, ಸುಧಾ, ಎಂ.ರೋಜಾ, ಲೋಕೇಶ್, ತೇಜಸ್ವಿನಿ, ವಿಭಾಗದ ಮುಖ್ಯಸ್ಥೆ ವನಜಾಕ್ಷಿ ಹಾಜರಿದ್ದರು.