ಮೇಗೂರು (ಬಾಳೆಹೊನ್ನೂರು): ಕೊಪ್ಪ ತಾಲ್ಲೂಕಿನ ಮೇಗೂರು ಬಳಿ ಅರಣ್ಯದಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ಅಧಿಕಾರಿಗಳು ತಕ್ಷಣ ನಂದಿಸಿ ಬಾರಿ ಅನಾಹುತವನ್ನು ತಡೆಯುವ ಮೂಲಕ ಸಮಯಪ್ರಜ್ಞೆ ಮೆರೆದಿದ್ದಾರೆ.
ಮೇಗೂರು ಬಳಿಯ ಅರಣ್ಯ ವಿಭಾಗದಲ್ಲಿನ ಬೃಹತ್ ದೂಪದ ಮರ ಟೊಳ್ಳಾಗಿದ್ದು ಅದರ ಒಳಗೆ ಮುಳ್ಳು ಹಂದಿ ಇರಬಹುದು ಎಂಬ ಶಂಕೆಯಿಂದ ಅಪರಿಚಿತರು ಬೆಂಕಿ ಹಾಕಿದ್ದರು. ಆ ಬೆಂಕಿ ನಿಧಾನವಾಗಿ ಕಾಡಿಗೆ ವ್ಯಾಪಸತೊಡಗಿತ್ತು. ದೈನಂದಿನ ಗಸ್ತಿನಲ್ಲಿದ್ದ ಅರಣ್ಯ ಇಲಾಖೆಯ ಚಂದ್ರ ಶೇಖರ್ ಮತ್ತು ಸಿಬ್ಬಂದಿ ಬೆಂಕಿ ಕಂಡ ತಕ್ಷಣ ಸ್ಥಳೀಯರ ಸಹಕಾರದಿಂದ ನಂದಿಸಲು ಮುಂದಾದರು. ಆದರೆ ಸಂಪೂರ್ಣವಾಗಿ ಬೆಂಕಿ ನಂದಿಸಲು ಅವರಿಂದ ಸಾಧ್ಯ ಆಗಲಿಲ್ಲ.
ನಂತರ ಕೊಪ್ಪದ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿ ವಾಹನ ಕರೆಯಿಸಿಕೊಂಡ ಸಿಬ್ಬಂದಿ, ಸುಮಾರು ಒಂದು ಗಂಟೆಗೂ ಅಧಿಕ ಕಾಲ ಶ್ರಮವಹಿಸಿ ಅಗ್ನಿ ನಂದಿಸುವಲ್ಲಿ ಸಫಲರಾದರು. ಅಧಿಕಾರಿಗಳ ಸಕಾಲಿಕ ಕ್ರಮದಿಂದಾಗಿ ದಟ್ಟ ಅರಣ್ಯಕ್ಕೆ ಬೆಂಕಿ ವ್ಯಾಪಿಸುವುದು ತಪ್ಪಿದೆ.