ಹಿರಿಯೂರು: ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಶಾಸಕ ಡಿ. ಸುಧಾಕರ್ ಭಾರಿ ಮೆರವಣಿಗೆಯಲ್ಲಿ ಬಂದು ಚುನಾವಣಾಧಿಕಾರಿ ರಾಜಗೋಪಾಲ್ ಅವರಿಗೆ ನಾಮಪತ್ರ ಸಲ್ಲಿಸಿದರು.
ಸುಧಾಕರ್ ಅವರ ಜತೆಯಲ್ಲಿ ಪತ್ನಿ ಹರ್ಷಿಣಿ ಸುಧಾಕರ್, ಜಿಲ್ಲಾ ಪಂಚಾಯ್ತಿ ಸದಸ್ಯರಾದ ಪಾಪಣ್ಣ, ಗೀತಾ ನಾಗಕುಮಾರ್, ಕಂದಿಕೆರೆ ತಿಪ್ಪೇಸ್ವಾಮಿ ಇದ್ದರು.
ಅಭಿವೃದ್ಧಿ ಕಾರ್ಯಗಳೇ ನನಗೆ ಶ್ರೀರಕ್ಷೆ:–
2008 ರಲ್ಲಿ ಚಳ್ಳಕೆರೆಯಿಂದ ಬಂದು ಪಕ್ಷೇತರನಾಗಿ ಸ್ಪರ್ಧಿಸಿದ್ದ ನನ್ನನ್ನು ಭಾರೀ ಅಂತರದಿಂದ ಇಲ್ಲಿನ ಮತದಾರರು ಆಯ್ಕೆ ಮಾಡಿದ್ದರು. 2013 ರಲ್ಲಿ ನನ್ನ ಮಾತೃಪಕ್ಷ ನನಗೆ ಟಿಕೆಟ್ ನೀಡಿತ್ತು. ರಾಜಕೀಯ ಜಿದ್ದಾಜಿದ್ದಿನ ಹೋರಾಟದಲ್ಲಿ ಎರಡನೇ ಬಾರಿಯೂ ಕ್ಷೇತ್ರದ ಜನ ನನ್ನ ಕೈಹಿಡಿದರು. ಈ ಬಾರಿಯೂ ನನಗೆ ಗೆಲ್ಲುವ ವಿಶ್ವಾಸವಿದೆ ಎಂದು ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಸುಧಾಕರ್ ಹೇಳಿದರು.
‘ತಾಂತ್ರಿಕ ಕಾರಣಗಳಿಂದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಪೂರ್ಣಗೊಳ್ಳುವುದು ತಡವಾಗಿದೆ. ಯೋಜನೆ ಜಾರಿಗೆ 60–70 ವರ್ಷದಿಂದ ಹೋರಾಟ ನಡೆಯುತ್ತಿದೆ. ನನ್ನ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಕಾಮಗಾರಿ ಅಂತಿಮ ಹಂತ ತಲುಪಿದೆ. ಹೀಗಿರುವಾಗ ಯೋಜನೆಯಿಂದ ವಾಣಿ ವಿಲಾಸ ಜಲಾಶಯಕ್ಕೆ ನೀರು ಬರದೇ ಇರುವುದಕ್ಕೆ ನನ್ನನ್ನು ಹೊಣೆ ಮಾಡುವುದು ಸರಿಯಲ್ಲ’ ಎಂದು ಪ್ರಶ್ನೆಯೊಂದಕ್ಕೆ ಸುಧಾಕರ್ ಉತ್ತರ ನೀಡಿದರು.
ಮೆರವಣಿಗೆಯಲ್ಲಿ ಮುಖಂಡರಾದ ಆರ್. ನಾಗೇಂದ್ರನಾಯ್ಕ್, ಖಾದಿ ರಮೇಶ್, ಪಿ.ಎಸ್. ಸಾದತ್ ಉಲ್ಲಾ, ಕಲ್ಲಟ್ಟಿ ತಿಪ್ಪೇಸ್ವಾಮಿ, ಕಂದಿಕೆರೆ ಸುರೇಶ್ ಬಾಬು, ಅಜೀಜ್, ಪಾಪಣ್ಣ, ಎಂ.ಡಿ. ಕೋಟೆ ಚಂದ್ರಣ್ಣ, ಎಸ್. ಚಂದ್ರಪ್ಪ, ಜಿ.ದಾದಾಪೀರ್, ಅಜ್ಜಣ್ಣ, ನಾಗಲಕ್ಷ್ಮಿಬಾಬು, ರವಿಚಂದ್ರ ಪಾಲ್ಗೊಂಡಿದ್ದರು.