ಕೆರಗೋಡು: ‘ರೈತರ ಬದುಕು ಸುಧಾರಣೆಗಾಗಿ ಹೊಸ ಆಲೋಚನೆಗಳನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿದ್ದೇನೆ; ಆಶೀರ್ವದಿಸಿ’ ಎಂದು ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸ್ವರಾಜ್ ಇಂಡಿಯಾ ಅಭ್ಯರ್ಥಿ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ದುದ್ದ ಹೋಬಳಿಯ ಎಚ್.ಮಲ್ಲಿಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಾದ ಬಿ.ಹೊಸಹಳ್ಳಿ, ಸಂಪಳ್ಳಿ, ಬೀರಗೌಡನಹಳ್ಳಿ, ಶಂಭೂನಹಳ್ಳಿ, ಎಚ್.ಮಲ್ಲಿಗೆರೆ ಗ್ರಾಮಗಳಲ್ಲಿ ಭಾನುವಾರ ಚುನಾವಣಾ ಪ್ರಚಾರ ನಡೆಸಿದರು.
‘ಮನೆ ಮನೆಗೆ ತೆರಳಿ ಜನರ ಬಳಿ ಮತಯಾಚನೆ ಮಾಡುತ್ತಿದ್ದೇವೆ. ತಂದೆಯವರ ಹೋರಾಟ, ಅವರು ಮಾಡಿದ ಅಭಿವೃದ್ಧಿಗಳೇ ನಮಗೆ ಪ್ರೇರಣೆ. ಈ ಭಾಗದ ಕೆರೆಗಳು ತುಂಬಿದರೆ ಕೃಷಿಗೆ ಮತ್ತು ದನ-ಕರುಗಳಿಗೆ ಉಪಯುಕ್ತವಾಗುವ ಕಾರಣ ಈಗಾಗಲೇ ದುದ್ದ ಹೋಬಳಿಯ 36 ಗ್ರಾಮಗಳ 54 ಕೆರೆ ತುಂಬಿಸುವ ಯೋಜನೆಯನ್ನು ರೂಪಿಸಿದ್ದೇವೆ’ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ಸಿ.ಕೆ.ನಾಗರಾಜು, ಮನ್ಮುಲ್ ಮಾಜಿ ಅಧ್ಯಕ್ಷ ಎಚ್.ಜೆ.ಚಂದ್ರು, ಹರೀಶ್, ಬೀರಗೌಡನಹಳ್ಳಿ ಹರ್ಷ, ಉಮೇಶ್, ರಾಜು, ಮರಿಚನ್ನೇಗೌಡ, ಶಿವಶಂಕರ್, ಶಂಭೂನಹಳ್ಳಿ ಸುರೇಶ್ ಇದ್ದರು.