ಚಾಮರಾಜನಗರ: ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನವಾದ ಮಂಗಳವಾರ ಜಿಲ್ಲೆಯಲ್ಲಿ 27 ನಾಮಪತ್ರ ಸಲ್ಲಿಕೆಯಾಗಿವೆ.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಸಾಮಾನ್ಯ ಜನತಾ ಪಾರ್ಟಿ (ಲೋಕ ತಾಂತ್ರಿಕ) ಅಭ್ಯರ್ಥಿಯಾಗಿ ಜೆ.ನಾರಾಯಣಸ್ವಾಮಿ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಅಭ್ಯರ್ಥಿಯಾಗಿ ಡಿ.ನಾಗಸುಂದರ, ಶಿವಸೇನಾ ಅಭ್ಯರ್ಥಿಯಾಗಿ ಶ್ರೀಕಂಠಸ್ವಾಮಿ, ಬಹುಜನ ಸಮಾಜ ಪಕ್ಷದ ಅಭ್ಯರ್ಥಿಯಾಗಿ ಎ.ಎಂ.ಮಲ್ಲಿಕಾರ್ಜುನ ಸ್ವಾಮಿ, ಭಾರತೀಯ ಡಾ.ಬಿ.ಆರ್.ಅಂಬೇಡ್ಕರ್ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಎಸ್.ಗಣೇಶ್, ಸ್ವತಂತ್ರ ಅಭ್ಯರ್ಥಿಯಾಗಿ ಬಿ.ಪ್ರಸನ್ನ ಕುಮಾರ್, ಪಕ್ಷೇತರ ಅಭ್ಯರ್ಥಿಗಳಾಗಿ ಎಂ.ಎಸ್.ಮಲ್ಲಿಕಾರ್ಜುನ್, ಎ.ಎಂ.ಮಾದೇಶ್ ಎಂಬುವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ಬಿಎಸ್ಪಿ, ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಆಲೂರುಮಲ್ಲು ಅವರು ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಜಿಲ್ಲಾ ಘಟಕದ ಅಧ್ಯಕ್ಷ ಬಾಗಳಿರೇವಣ್ಣ, ಜೆಡಿಎಸ್ ರಾಜ್ಯ ಕಾರ್ಯಕಾರಿಣಿ ಸದಸ್ಯ ಸಿ.ಎಂ.ಕೃಷ್ಣಮೂರ್ತಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಸೈಯದ್ ಇದ್ರೀಸ್ ಅವರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ಇದಕ್ಕೂ ಮೊದಲು ರಾಮಸಮುದ್ರದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ನಂತರ ಬಿಎಸ್ಪಿ ಮತ್ತು ಜೆಡಿಎಸ್ ಮುಖಂಡರು, ಕಾರ್ಯಕರ್ತರ ಜತೆಯಲ್ಲಿ ತಾಲ್ಲೂಕು ಕಚೇರಿಗೆ ತೆರಳಿದರು.
ಅಭ್ಯರ್ಥಿ ಆಲೂರುಮಲ್ಲು ಮಾತನಾಡಿ, ಜೆಡಿಎಸ್ ಮತ್ತು ಬಿಎಸ್ಪಿಯ ಜನಪರ ಕಾರ್ಯಕ್ರಮಗಳೇ ಗೆಲುವಿಗೆ ಸಹಕಾರಿಯಾಗಲಿದ್ದು, ಚುನಾವಣೆಯಲ್ಲಿ ಗೆದ್ದೆಗೆಲ್ಲುತ್ತೇನೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರಾಜ್ಯ ಅಭಿವೃದ್ದಿಪಡಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದರು.
ಮುಖಂಡರಾದ ಬ್ಯಾಡಮೂಡ್ಲು ಬಸವಣ್ಣ, ಪಿ.ಮಹದೇವಪ್ಪ, ಜೆಡಿಎಸ್ ಜಿಲ್ಲಾ ಆಪ್ತ ಕಾರ್ಯದರ್ಶಿ ಸಿ.ಕೆ.ರಂಗರಾಮ್, ಸೇವಾದಳ ಜಿಲ್ಲಾ ಅಧ್ಯಕ್ಷ ನಯೀಮ್, ತಾಲ್ಲೂಕು ಅಧ್ಯಕ್ಷ ಚಿಕ್ಕಅಂಕಶೆಟ್ಟಿ, ನಗರ ಘಟಕ ಅಧ್ಯಕ್ಷ ಜಿ.ಎಂ.ಶಂಕರ್, ಎಸ್ಟಿ ತಾಲ್ಲೂಕು ಅಧ್ಯಕ್ಷ ರಾಮಚಂದ್ರ, ಡಿ.ಎನ್.ಉಷಾ ಹಾಜರಿದ್ದರು.
ಸಾಮಾನ್ಯ ಜನತಾ ಪಕ್ಷ (ಎಸ್ಜೆಪಿ)ಯ ಅಭ್ಯರ್ಥಿ ಜೆ.ನಾರಾಯಣಸ್ವಾಮಿ ಅವರು ಪಕ್ಷದ ರೈತ ಮೋರ್ಚಾಧ್ಯಕ್ಷ ಜಯರಾಮೇಗೌಡ, ಪ್ರಧಾನ ಕಾರ್ಯದರ್ಶಿ ಸೈಯದ್ ಮುನಾವರ್ ಪಾಷ, ಅಲ್ಪಸಂಖ್ಯಾತರ ಯುವ ಮುಖಂಡ ಇಮ್ತಿಯಾಜ್, ಬಸಪ್ಪ ಅವರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.
ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಆರ್ಪಿಐ) ಅಭ್ಯರ್ಥಿ ಡಿ.ನಾಗಸುಂದರ ಅವರು ಪಕ್ಷದ ಮುಖಂಡರಾದ ಬಿ.ವಿಶ್ವನಾಥ್, ಅರುಣ್ಕುಮಾರ್, ಚಂದ್ರಶೇಖರ್, ಸೋಮಣ್ಣ ಅವರೊಂದಿಗೆ ತಾಲ್ಲೂಕು ಕಚೇರಿಗೆ ತೆರಳಿ ಚುನಾವಣಾಧಿಕಾರಿಗಳಿಗೆ ಉಮೇದುವಾರಿಕೆಯನ್ನು ಸಲ್ಲಿಸಿದರು.
ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್ ಕುಮಾರ್, ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷದಿಂದ ಎನ್.ಡಿ.ಸ್ವಾಮಿ ಹಾಗೂ ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ಮಹೇಶ್, ಬಿ.ಸಿದ್ದಯ್ಯ, ದುಂಡಯ್ಯ, ಕೆ.ಎಂ.ಮನಸ್ ಎಂಬುವರು ತಲಾ ಒಂದು ನಾಮಪತ್ರ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.