ಚಿಕ್ಕಮಗಳೂರು: ಕ್ಷೇತ್ರದಲ್ಲಿನ ಬರ ಪರಿಸ್ಥಿತಿ ನಿಭಾಯಿಸಲು ಇಲ್ಲಿನ ಶಾಸಕರು ವಿಫಲರಾಗಿದ್ದಾರೆ ಎಂದು ಚಿಕ್ಕಮಗಳೂರು ವಿಧಾನಸಭಾಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ.ಎಲ್.ಶಂಕರ್ ದೂಷಿಸಿದರು.
ಕ್ಷೇತ್ರ ವ್ಯಾಪ್ತಿಯ ಸಿಂದಿಗೆರೆಯಲ್ಲಿ ಮಂಗಳವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
ಪ್ರಕೃತಿ ಮುನಿಸಿಕೊಂಡರೆ ಯಾರಿಗೂ ಉಳಿಗಾಲ ಇಲ್ಲ. ಮನುಷ್ಯ ಬುದ್ಧಿಜೀವಿಯಾಗಿದ್ದು, ಬರಗಾಲದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಂದಾಲೋಚನೆ ಇರಬೇಕು. ಸಖರಾಯಪಟ್ಟಣ ಭಾಗದ ಜನ– ಜಾನುವಾರುಗಳು ಬರಗಾಲಕ್ಕೆ ಸಿಕ್ಕಿ ನರಳಿದ್ದಾರೆ. ಮೂರುಬಾರಿ ಶಾಸಕರಾಗಿ ಆಯ್ಕೆಯಾಗಿರುವವರಿಗೆ ಬರದ ಛಾಯೆ ಅರಿವಿಗೆ ಬಾರದಿರುವುದು ವಿಪರ್ಯಾಸ ಎಂದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಿ.ಗಾಯತ್ರಿ ಶಾಂತೇಗೌಡ ಮಾತನಾಡಿ, ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಸಖರಾಯಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಮಹಡಿಮನೆ, ಮುಖಂಡರಾದ ವಿನಾಯಕ್, ಶಂಕರ್ ನಾಯ್ಕ, ಎನ್.ಡಿ ಚಂದ್ರಪ್ಪ, ಸಂದೀಪ್, ಎ.ಎನ್.ಮಹೇಶ್ ಇದ್ದರು.