ಮಂಗಳೂರು: ಟೊಯೊಟಾ ಕಂಪನಿಯು ಹಲವಾರು ಹೊಸ ವೈಶಿಷ್ಟ್ಯಗಳಿಂದ ಕೂಡಿದ ನೂತನ ಕಾರ್ ‘ಯಾರಿಸ್’ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ.
ಇಲ್ಲಿಯ ಪಡೀಲ್ನಲ್ಲಿರುವ ಷೋರೂಂನಲ್ಲಿ ಐಎಂಎ ಮಂಗಳೂರು ಘಟಕದ ಅಧ್ಯಕ್ಷ ಡಾ.ಕೆ.ಆರ್. ಕಾಮತ್ ಅವರು ಹೊಸ ಕಾರನ್ನು ಅನಾವರಣಗೊಳಿಸಿದರು.
‘ಟೊಯೊಟಾ ಕಂಪನಿಯು ಅನೇಕ ಹೊಸ ಸೌಲಭ್ಯಗಳನ್ನು ಒಳಗೊಂಡಿರುವ ಹೊಸ ಕಾರ್ ಪರಿಚಯಿಸಿದೆ. ಇದಕ್ಕೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿದೆ’ ಎಂದು ಅವರು ಹೇಳಿದರು.
ವಾಹನದ ವಿಶೇಷತೆ ಬಗ್ಗೆ ಮಾಹಿತಿ ನೀಡಿದ ಸಂಸ್ಥೆಯ ಸಿಬ್ಬಂದಿ ವಾದಿರಾಜ್, ‘ಯಾರಿಸ್’ ವಾಹನವು 7 ಏರ್ಬ್ಯಾಗ್, ವಿಎಸ್ಸಿ, ಎಚ್ಎಸಿ, ಎಚ್ಎಸ್ಇಎ ಗ್ಲಾಸ್, ಟಿಪಿಎಂಎಸ್ ಸೇರಿ 20ಕ್ಕಿಂತಲೂ ಹೆಚ್ಚಿನ ವಿಶೇಷತೆ ಹೊಂದಿದೆ’ ಎಂದರು.
ಮುಖ್ಯ ಅತಿಥಿಯಾಗಿ ರೂಪದರ್ಶಿ ಜೆಸಿಟಾ ಅನೋಲ ರಾಡ್ರಿಗಸ್ ಭಾಗವಹಿಸಿದ್ದರು. ಕಂಪನಿಯ ಮಂಗಳೂರು ಘಟಕದ ಅಧ್ಯಕ್ಷ ಅರೂರ್ ಪ್ರಭಾಕರ್ ರಾವ್, ಹಣಕಾಸು ನಿರ್ದೇಶಕ ಆರೂರ್ ಪ್ರಕಾಶ್ ರಾವ್, ಮಾರುಕಟ್ಟೆ ವ್ಯವಸ್ಥಾಪಕ ಎಸ್.ಬಾಲಕೃಷ್ಣ, ವ್ಯವಸ್ಥಾಪಕ ನಿರ್ದೇಶಕ ಗಣೇಶ್ ರಾವ್, ಮೆಲ್ವಿನ್ ಫರ್ನಾಂಡಿಸ್ ಇದ್ದರು.
ಬುಕಿಂಗ್ ಆರಂಭ
ಬೆಂಗಳೂರು: ಟೊಯೊಟಾ ಕಿರ್ಲೊಸ್ಕರ್ ಮೋಟರ್ ಕಂಪನಿಯು (ಕೆಟಿಎಂ), ತನ್ನ ಮಧ್ಯಮ ಗಾತ್ರದ ಸೆಡಾನ್ ಯಾರಿಸ್ ಕಾರ್ನ ಮುಂಗಡ ಬುಕಿಂಗ್ಗೆ ಚಾಲನೆ ನೀಡಿದೆ.
ತೀವ್ರ ಸ್ಪರ್ಧೆಯ ಮಧ್ಯಮ ಗಾತ್ರದ ಸೆಡಾನ್ ವಲಯದಲ್ಲಿ ಈ ಕಾರ್, ದೇಶಿ ಮಾರುಕಟ್ಟೆಯಲ್ಲಿ ಹೋಂಡಾ ಸಿಟಿ, ಮಾರುತಿ ಸುಜುಕಿ ಸಿಯಾಜ್ ಮತ್ತು ಹುಂಡೈನ ವರ್ನಾ ಕಾರುಗಳಿಗೆ ಸ್ಪರ್ಧೆ ನೀಡಲಿದೆ.
ಟೊಯೊಟಾ ಮತ್ತು ಕಿರ್ಲೋಸ್ಕರ್ ಸಮೂಹದ ಜಂಟಿ ಸಂಸ್ಥೆಯಾಗಿರುವ ‘ಕೆಟಿಎಂ’, ಈ ಕಾರನ್ನು ಮೇ ತಿಂಗಳಿನಲ್ಲಿ ಮಾರುಕಟ್ಟೆಗೆ ಪರಿಚಯಿಸಲಿದೆ.
ಗ್ರಾಹಕರು, ಸಂಸ್ಥೆಯ ಡೀಲರ್ಗಳ ಬಳಿ ₹ 50 ಸಾವಿರ ಮುಂಗಡ ಪಾವತಿಸಿ ಬುಕಿಂಗ್ ಮಾಡಬಹುದು. ಕಾರ್ನ ಬೆಲೆ (ಎಕ್ಸ್ ಷೋರೂಂ) ₹ 8.75 ಲಕ್ಷದಿಂದ ₹ 14.07 ಲಕ್ಷದವರೆಗೆ ಇರಲಿದೆ. ದೇಶದಾದ್ಯಂತ ಎಕ್ಸ್ಷೋರೂಂ ಬೆಲೆ ಏಕರೂಪವಾಗಿರಲಿದೆ.