ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಹಿರಿಯ ವಕೀಲೆ ‘ಇಂದು ಮಲ್ಹೊತ್ರಾ’ ಅವರನ್ನು ನೇಮಕ ಮಾಡುವ ಕೊಲಿಜಿಯಂ ಶಿಫಾರಸನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ.
ಇದರಿಂದಾಗಿ, ವಕೀಲಿ ವೃತ್ತಿಯಿಂದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ನೇರ ನೇಮಕವಾಗಲಿರುವ ಮೊದಲ ಮಹಿಳೆಯಾಗಲಿದ್ದಾರೆ ಮಲ್ಹೊತ್ರಾ. ಆದರೆ, ಉತ್ತರಾಖಂಡ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಕೆ.ಎಂ. ಜೋಸೆಫ್ ಅವರ ನೇಮಕ ಶಿಫಾರಸನ್ನು ಸರ್ಕಾರ ತಡೆ ಹಿಡಿದಿದೆ.
ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಕೊಲಿಜಿಯಂ ಮಲ್ಹೊತ್ರಾ ಮತ್ತು ಜೋಸೆಫ್ ಅವರ ಹೆಸರನ್ನು ಜನವರಿಯಲ್ಲಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿತ್ತು. ಅದನ್ನು ಪರಿಶೀಲಿಸಿದ್ದ ಕಾನೂನು ಸಚಿವಾಲಯ ಮಲ್ಹೊತ್ರಾ ಅವರ ನೇಮಕಕ್ಕೆ ಮಾತ್ರ ಅನುಮತಿ ನೀಡಲು ನಿರ್ಧರಿಸಿತ್ತು.
ಜೋಸೆಫ್ ಅವರ ಹೆಸರನ್ನು ಶಿಫಾರಸು ಮಾಡುವಲ್ಲಿ ಕೊಲಿಜಿಯಂ ಸೇವಾ ಹಿರಿತನ ಮತ್ತು ಪ್ರಾದೇಶಿಕ ಪ್ರಾತಿನಿಧ್ಯವನ್ನು ಕಡೆಗಣಿಸಿದೆ ಎಂಬುದು ಸರ್ಕಾರದ ವಾದ. ಹೈಕೋರ್ಟ್ನ 669 ನ್ಯಾಯಾಧೀಶರ ಪಟ್ಟಿಯಲ್ಲಿ ಜೋಸೆಫ್ ಅವರು 42ನೇ ಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.