ರಾಣೆಬೆನ್ನೂರು: ದೇಶದ ಅಭಿವೃದ್ಧಿಗೆ ಆದಾಯ ತೆರಿಗೆ ಬೆನ್ನೆಲುಬು. ಆದ್ದರಿಂದ ದೇಶದ ಅಭಿವೃದ್ಧಿಗೆ ಬೇಕಾದ ಹಣವನ್ನು ಕ್ರೋಢಿಕರಿಸಲು ಎಲ್ಲರೂ ತಮ್ಮ ತಮ್ಮ ತೆರಿಗೆಯನ್ನು ಕೊಟ್ಟು ಪ್ರಾಮಾಣಿಕವಾಗಿ ಸಹಾಯ ಮಾಡಬೇಕಾಗಿದೆ ಎಂದು ಇಂಡಿಯನ್ ಬ್ಯಾಂಕಿನ ಹಿರಿಯ ವ್ಯವಸ್ಥಾಪಕಿ ಮಾಧವಿ.ಎಸ್ ಹೇಳಿದರು.
ಇಲ್ಲಿನ ಎಸ್ಜೆಎಂವಿ ಮಹಿಳಾ ಕಾಲೇಜಿನ ಶಿಮುಶ ಸಭಾಂಗಣದಲ್ಲಿ ಈಚೆಗೆ ನಡೆದ ಪ್ರಸಕ್ತ ಸಾಲಿನ ವಾಣಿಜ್ಯಶಾಸ್ತ್ರ ಸಂಘದ ಚಟುವಟಿಕೆಗಳ ಸಮಾರೋಪ ಸಮಾರಂಭ, ಪ್ರತಿಭಾ ಪುರಸ್ಕಾರ ಹಾಗೂ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮ ದೇಶದಲ್ಲಿ ನಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಂಡು ದೇಶದ ಆರ್ಥಿಕ ಸ್ಥಿತಿ ಸುಧಾರಿಸಲು ಸಹಾಯ ಮಾಡಬೇಕು, ರಾಜ್ಯದ ಬ್ಯಾಂಕ್ಗಳಲ್ಲಿ ಕನ್ನಡಿಗ ನೌಕರರ ಸಂಖ್ಯೆ ಕಡಿಮೆಯಾಗುತ್ತಿದೆ. ವಿದ್ಯುನ್ಮಾನ ಬ್ಯಾಂಕಿನ ಮತ್ತು ನಗದು ರಹಿತ ಬ್ಯಾಂಕಿನ ವ್ಯವಹಾರಗಳ ಪ್ರಯೋಜನ ಮತ್ತು ಅವಶ್ಯಕತೆ, ಇದರಿಂದಾಗುವ ತೊಂದರೆಗಳ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿದರು.
ದೇಶದಲ್ಲಿ ಅವಿಭಕ್ತ ಕುಟುಂಬ ಪದ್ಧತಿ ನಾಶವಾಗುತ್ತಿದ್ದು, ವಿಭಕ್ತ ಕುಟುಂಬಗಳು ಹೆಚ್ಚಾಗುತ್ತಿವೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ವಿಷಾದಿಸಿದರು.
ಅವಿಭಕ್ತ ಕುಟುಂಬದಿಂದ ದೊರೆ ಯುವ ಸಂತೋಷ ಮತ್ತು ಅನುಕೂಲಗಳ ಬಗ್ಗೆ ಮನವರಿಕೆ ಮಾಡಿಕೊಟ್ಟ ಅವರು ‘ಅವಿಭಕ್ತ ಕುಟುಂಬಗಳ ಹೆಚ್ಚಳಕ್ಕೆ ವಿದ್ಯಾರ್ಥಿನಿಯರು ಪ್ರೇರೇಪಿಸಬೇಕು’ ಎಂದು ಯುವಕರಿಗೆ ಸಲಹೆ ನೀಡಿದರು.
ಬಿಕಾಂ 1 ಮತ್ತು 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಯಶಸ್ವಿ ಎಸ್ ಜೈನ್, ವಿಜಯಲಕ್ಷ್ಮಿ ಶಿವಪೂಜಿ ಮತ್ತು ಪೂರ್ಣಿಮಾ ಸಂಗಾಪುರ ಅವರನ್ನು ಗೌರವಿಸಲಾಯಿತು. ಪ್ರಾಚಾರ್ಯ ಪ್ರೊ.ಎಸ್.ಎಂ.ಜಿಡ್ಡಿಯವರ ಅಧ್ಯಕ್ಷತೆ ವಹಿಸಿದ್ದರು.