ಲಿಂಗಸುಗೂರು: ಕೃಷ್ಣಾ ನದಿಯ ನಡುಗಡ್ಡೆ ಪ್ರದೇಶಗಳ ಪೈಕಿ ಕಡದರಗಡ್ಡಿ ಗ್ರಾಮಸ್ಥರು ಗೋನವಾಟ್ಲ ಕಡದರಗಡ್ಡಿ ಮಧ್ಯೆ ಸೇತುವೆ ನಿರ್ಮಾಣಕ್ಕೆ ಸ್ಪಂದಿಸದಿರುವುದನ್ನು ವಿರೋಧಿಸಿ 2018ರ ವಿಧಾನಸಭೆ ಚುನಾವಣೆ ಬಹಿಷ್ಕರಿಸಲಾಗಿದೆ ಎಂದು ಬ್ಯಾನರ್ ಹಾಕಿದ್ದಾರೆ.
‘ಗ್ರಾಮದ ಪ್ರವೇಶದಲ್ಲಿ ಮತ್ತು ಅಗಸಿ ಮುಂದಿನ ಕಟ್ಟಡವೊಂದರಲ್ಲಿ ಎರಡು ಬ್ಯಾನರ್ಗಳು ಇವೆ. ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದೇವೆ. ಜಿಲ್ಲಾಡಳಿತ ಅಥವಾ ಯಾವ ಪ್ರತಿನಿಧಿ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ಹೀಗಾಗಿ ಈ ನಿರ್ಧಾರ’ ಎಂದು ಹನುಮನಗೌಡ ಪಾಟೀಲ ತಿಳಿಸಿದರು.
‘ಮತದಾನ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ನಮ್ಮ ಸಮಸ್ಯೆ ಮಾತ್ರ ಬಗೆಹರಿಯುತ್ತಿಲ್ಲ’ ಎಂದು ತಿಳಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಸಹಾಯಕ ಚುನಾವಣಾಧಿಕಾರಿ ಎಂ.ಎ.ಎಸ್.ಬಾಬು ಅವರು ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು. ಆದರೆ ಅವರ ಮಾತಿಗೆ ಒಪ್ಪದ ಗ್ರಾಮಸ್ಥರು ಬಹಿಷ್ಕಾರ ನಡೆಸುತ್ತೇವೆ ಎಂದು ತಿಳಿಸಿದರು.